Posts

Showing posts from October, 2009

ಯಾತ್ರೆ...

ಯಾತ್ರೆ  ಎಂದೋ ಆರಂಬಿಸಿದ ಯಾತ್ರೆ, ಮುಗಿಯದ ಅಕ್ಷಯ ಪಾತ್ರೆ ಹೊರಡುತ್ತಲೆ ಇದೆ ಅನಿಯಮಿತ, ಅನೀರಿಕ್ಷಿತ ಹೊಸ ತಳಿಗಳು, ಅಳಿಯುತ್ತಲೇ ಇದೆ ಅಯೋಗ್ಯ ಪೀಳಿಗೆ ಕಾಲನ ಜೋಳಿಗೆಯಲ್ಲಿ. ಚಿರಚಾಲಿತ ಬದಲಾಗುವ ಈ ಗೂಡಿನಲ್ಲಿ, ಮರೆಯಾಗುತ್ತಿವೆ ಹಾಡಿ, ಹಳ್ಳಿಗಳು ನಿಲ್ದಾಣಗಳ ಹಿಂದೆ ಒಂದರ ಹಿಂದೆ ಒಂದು, ರಾಷ್ಟ್ರೀಯ ಹೆದ್ದಾರಿಯ ಮಾಯವಾಗುವ ಮಲಿಗಲ್ಲು, ಅಂಕಿ ಸಂಖ್ಯೆಗಳು ಅಸ್ಪಷ್ಟ, ಒಮ್ಮೊಮ್ಮೆ ಅದೃಶ್ಯ, ವೇಗದ ಗತಿಯಲ್ಲಿ, ಗುರಿ ಗೊಂದಲಮಯ, ಗ್ರಹಿಸಲಾರದ ದೂರ, ತಲುಪಲಾರದ ಊರ. ಅಲ್ಲಲ್ಲಿ ಸಡಗರ, ಉತ್ಸವ, ತೇರು ಸ್ವಾಗತ ಸಂಭ್ರಮ ನಿರ್ಜನ ಮೆರವಣಿಗೆ, ಜನರು ತಿದ್ದದ ಪುರಾತನ ಬರವಣಿಗೆ ಶಿಲಾಶಾಸನ ಹಾಳುಬಿದ್ದ ಕೋಟೆಯೊಳಗೆ ಕಳೆದು ಹೋದ ಭಾವ ವಿಚಿತ್ರ ಸ್ವಭಾವ ಹಗಲು ರಾತ್ರಿ ಅರಿವಾಗದ ಅಸಂಗತ ಥಟ್ಟನೆ ಎದುರಾದ ಮಿಣಕು ಜ್ಯೋತಿ ಎರಗಿ ಬಂತು ಬೆಟ್ಟದಂತೆ, ಬೆಳಕ ಬಯಲು ಕತ್ತಲಾದ ಆ ಕ್ಷಣ, ಅನಿರೀಕ್ಷಿತ ನಿಂತ ಗಾಡಿ, ಎಲ್ಲೆಲ್ಲೂ ನಿರ್ವಾತ ಮೋಡಿ ತಲೆಯೆಲ್ಲ ಹಾರಿದೆ ಗುಂಗಾಡಿ, ದಾಟಿ ಹೋಗಿದೆ ಕಾಲದ ಗಡಿ.... ಎಲ್ಲೆಲ್ಲೂ ಈಗ ಗೊಂದಲದ ಗಡಿಬಿಡಿ,

ಪ್ರಾಯ.....

ಆಕಸ್ಮಿಕ... ಕುಡಿವ ಮಜ್ಜಿಗೆಯಲಿ ನೆರೆತ ಗಡ್ಡದ ಮುದಿ ಕೂದಲು, ಮತ್ತೇರಿ ಕುಣಿದಾಗ ನಲಿದಾಡಿತು, ಸಜ್ಜಿಗೆಯ ಪರಾತದಲಿ ಕಳಚಿ ಬಿದ್ದ ಕಟ್ಟಿಸಿದ ಹಲ್ಲು, ಬಿಟ್ಟ ಬಾಯಿ ಸುರಿಸುವ ಜೊಲ್ಲು, ಕಂಡಾಗ.... ಕೋಶ, ಜೀವಕೋಶಗಳ ಚಿತ್ಕಾರ, ಭಾರ, ಅರ್ಥವಿಲ್ಲದ ವ್ಯವಹಾರ ಜಿಗುಪ್ಸೆ ಅಪಾರ ಯಾವ ಮಮಕಾರ? ಯಾರ ಸಹಕಾರ? ಶ್ವಾಸವೇ ಬಲು ಭಾರ, ಮುಕ್ತ ಗಾಳಿಗೂ ಬಂದಿದೆ ಸಂಚಕಾರ....

ವಿವೇಕಿ...

ವಿವೇಕಿ  ಮಾಯಾವಿ, ಸೂಕ್ಷ್ಮಾಣುಗಳಂತೆ, ಆದರೂ ಸರ್ವಂತರ್ಯಾಮಿ ಪರಮಾಣುವಿನಂತೆ. ಕ್ಷಣ ಕ್ಷಣದಲ್ಲೂ ಅನುಭವ, ಆದರೂ ಅರಿವು ಅಸಂಭವ ತ್ರಿಕಾಲ ಜ್ಞಾನಿಗಳಿಗೆ. ಹಾಕಿರುವ ಬಣ್ಣದ ಚಾಳೀಸು ಬದಲಿಸಿ ನೋಡು, ಆಗಬಹುದು ಪರಕಾಯ ಪ್ರವೇಶ. ಕೊಡು...ಕಣ್ಣನ್ನು ಸೂಕ್ಷ್ಮದರ್ಶಕ ಮಸೂರಕ್ಕೆ, ತೆಗೆ ಮುಚ್ಚಳ... ನೋಡು... ಒಳಗೆ, ಹೊರಗೆ, ಅವತರಿಸಬಹುದು ಕಾಣದ ಆ ದೃಶ್ಯ ಇಣುಕ ಬಹುದು ಮನುಕುಲದ ಆದರ್ಶ, ದೃಷ್ಟಿ ದೋಷವೇ? ವಿಸ್ತರಿಸಿ ಗೋಚರಿಸಿದ ವೈರಾಣು, ಸೃಷ್ಟಿ ರೋಷವೆ? ಪರಿಸರ ಹೈರಾಣು! ಸೋಂಕು ಪ್ರಗತಿ, ಸಾಂಸ್ಕೃತಿಕ ರೋಗಾಣು ಹೊರಗೆ ಕಾಣದ ಹುಣ್ಣು ಆತ್ಮಕ್ಕೆ ಹಿಡಿದಿದೆ ಮಣ್ಣು. ವಾಸಿಸಲು ಆಗಿದೆ ಪರಿಸರ ಅಯೋಗ್ಯ ಪ್ರಗತಿ ಜ್ಞಾನ ತಂದ ಭಾಗ್ಯ ತಾಯಿ ಹಿಡಿದಳು ಹಾಸಿಗೆ, ನಮ್ಮ ಏಳಿಗೆ. ಅರಿವಿದೆ ನಮಗೆ, ದೃತರಾಷ್ಟ್ರ ಪ್ರೇಮ ಕಾಣದೆ ತಮಗೆ? ಕುಳಿತಿರುವಿರಿ ಯಾಕೆ? ತೆಪ್ಪಗೆ. ನಿಜ.... ಎಂದೋ ಬಿತ್ತಿದ ಬೀಜ ಮೊಳೆತು, ನಿರಂಕುಶ ರಾಜ ಸಾಗಿದೆ ನಿರಂತರ, ನಿಲ್ಲದ ಪೈಪೋಟಿ, ಯಾರಿದರ ಮೇಟಿ? ಕಲಿಸಿಕೊಟ್ಟಿದೆ ಸುಳಿವು ಸಮರ್ಥರ ಉಳಿವು, ಅಸಮರ್ಥರ ಅಳಿವು, "ದುಷ್ಟ ಶಿಕ್ಷಿಕ ಶಿಷ್ಟ ರಕ್ಷಕ" ಚೆನ್ನಾಗಿದೆ ಈ ಶ್ಲೋಕ! ಯಾರಿದರ ನಿರ್ಧಾರಕ? ಹಾಡುತ್ತಲೇ ಇದ್ದಾನೆ ಮೈ ಮರೆತು ಗಾಯಕ! ಯಾರು ಖಳನಾಯಕ? ನಂಬಿದ್ದಾನೆ, ಅಸಲು ವಾರಸುದಾರ ತಾನೆ, ಆ ವಿವೇಕಿ ಮಾನವ, ಯಜಮಾನ ಯಾರಿವನ ಸಮಾನ? ಹರಡಿ ವಿನಾಶದಂಟು ಬೇನೆ,

ದ್ವಂದ್ವ....

ತುಮಲ  ಕೃಷ್ಣನಾಟಕೆ ದಾಳವಾದ ಸಾದಕ ಸುಯೋಧನ ಅಸಹಾಯಕ... ಚೀತ್ಕಾರ ರಣಭೂಮಿಯಲ್ಲಿ, ಕಿರಾತಕ, ಬೆರಳೆಣಿಸಿ ಅನುಭವಿಸಿದ ನರಕ ವ್ಯರ್ಥ ಬದುಕಿನ ಪಾಕ. ಕ್ಷಣ ಕ್ಷಣಕೆ ವಿಸ್ತರಿಸಿದ ವಾಮನ, ಕುಗ್ಗಿ ಕರಗಿತು ತನು ಮನ, ತೀಟೆ ತೆವಲು, ಮೀಟೆ ಜನನ, ಪೂರ್ಣ ತೃಪ್ತ ಸಾಧನ, ಹಗಲುವೇಷ ಜೀವನ, ಸರಿ ಅರಣ್ಯ ರೋಧನ. ನೀನು, ಧ್ವನಿಯಾಗದ ಭಾಷೆ, ಅರ್ಥರಹಿತ ಅಭಿಲಾಷೆ, ವ್ಯಕ್ತವಾಗದ ಬದುಕು, ಇಲ್ಲಿ ಉಳಿಯಲು ನಾಲಾಯಕು, ಈಗ ಸಾಕು, ಉಳಿದಿಲ್ಲ ಒಂದು ಪೈಸೆಯ ಕೀಮ್ಮತ್ತು, ಉಸಿರಿಸಲು ಇಲ್ಲ ನಿನಗೆ ಹಿಮ್ಮತ್ತು, ಬೇಕಿತ್ತು... ಆದರೂ ತಾಕತ್ತು ಮಾಡುತ್ತಲೇ ಇದ್ದಿಯಾ ಕರಾಮತ್ತು ಅಂದಿನಿಂದ ಇಂದಿನವರೆಗೂ.... ಕಲೆಯುವುದಿಲ್ಲ ಮಹರಾಯ ನೀನು ಯಾವೊತ್ತು ಬೇಸರದ ಹೊರೆ ಹೊತ್ತು, ಕನಸು ಕಾಣುವ ಗಮ್ಮತ್ತು ಬೇಕಿಲ್ಲ ಸಂಪತ್ತು, ಬತ್ತಿದೆ ಭವ್ಯ ಬದುಕಿನ ಮತ್ತು ಹೊರಡು ಬೇಗ, ಆಯಿತು, ಮದಿರಾಲಯ ಮುಚ್ಚುವ ಹೊತ್ತು.......