ಚಿಯರ್ಸ್ ಹೇಳುವ.....ರಾತ್ರಿ,ಹಗಲು.

ಬೆಳಕು ಹೊರಡುವ ಮುನ್ನ ಕತ್ತಲಿಗೆ ಹೇಳಿಹೋಗಿದ್ದು
ಹೀಗೆ...
"ಈಗ ಹೋಗುತ್ತೇನೆ.... ನಾಳೆ ಮತ್ತೆ ಬರುತ್ತೇನೆ,
ನೀನು
ಇಂದು ಉನ್ಮತ್ತಗೊಳಿಸಿದ ಕನಸಿನ ನಶೆಯನ್ನು ಇಳಿಸಿ
ಎಬ್ಬಿಸಬೇಕಿದೆ..... ಅವರುಗಳನ್ನು

ನಿನ್ನದು ತಪ್ಪಿಲ್ಲ...ನಿಜ
ನೀನು ಎಂದಿನಂತೆ ಕಾರ್ಯನಿರತ
ನೀನಿದ್ದ ಕಡೆ,ಮಂಪರು, ಕಲ್ಪನೆ,ಕನಸುಗಳು ಸಹಜ
ಬದುಕಿನ ಬೆವರಿಂದ ಪರಾರಿ, ಆಕರ್ಷಿತ,
ಇದು ನಿಜ ಸ್ವಾಭಾವಿಕ, ಲೌಕಿಕ
ಕಾರಣ ವಾಸ್ತವ ಎಲ್ಲರದೂ ಝರ್ಜರಿತ,
ನಾನೇನು ಮಾಡಲಿ ಹೇಳು...ಮೊದಲು
ಬೆಳಕಿಗೆ ನಾನೊಬ್ಬನೇ ಅಗಿದ್ದೆ ವಾರಸುದಾರ
ಆಗ ನೀನೇ  ಆಗಿದ್ದೆ ಅಂಧಕಾರ ಸಾಮ್ರಾಜ್ಯದ ಸರದಾರ

ಆದರೆ....ನಿಶೆ.... ನಿನ್ನನ್ನೇ ಅಣಕಿಸಿ,  
ಮೂಲೆ ಗುಂಪು ಮಾಡಿ,
ನನ್ನ ವಿಶ್ರಾಂತ ಸ್ಥಿತಿಗೆ ಹೊಂಚುಹಾಕಿ ಕಾದುಕೊಂಡು....
ಚಂದ್ರನನ್ನೂ ಕೇರ್ ಮಾಡದೇ.
ಹೊನಲು ಬೆಳಕುಗಳ ಪ್ರತಿಫಲನದಲ್ಲಿ ನಿನ್ನ ನೋಡಿ ನಗುವ,
ನನ್ನನ್ನೇ ಹಂಗಿಸಿ,  ಕುರುಡುಮಾಡುವ
ಈ ಜನ  
ಯಾರಿಗೂ ಕಾಣಿಸದಂತೆ ಆನಂದಿಸುತ್ತಾರೆ.
ತಮ್ಮದೇ ಬೆಳಕಿನ ಸೃಷ್ಟಿಯಲ್ಲಿ.......
ನಮ್ಮ ಅಸ್ತಿತ್ವವನ್ನೇ ಮರೆತ....ಅಮಲು

ಸದ್ಯಕ್ಕೆ ನಾವು ನಿಸ್ಸಾಹಯಕರು
ಚಿಯರ್ಸ್ ಹೇಳಿ ಹೋಗುವುದೇ ಒಳ್ಳೆಯದು.
ನಮ್ಮ ಒಗ್ಗಟ್ಟು ಹೀಗೆ ಇರಲಿ
ಬಾ...ಕತ್ತಲೇ....ನಮ್ಮ ಕರ್ತ್ಯವ್ಯಕ್ಕೆ ಮರಳೋಣ
ನಾಳೆ ನನ್ನ ಶಿಫ್ಟಿಗೆ ತಡಮಾಡದೆ,
ಸಮಯಕ್ಕೆ ಸರಿಯಾಗಿ ಬಂದೇ ಬರುತ್ತೇನೆ...."

Comments

Popular posts from this blog

ಕಾಗೆ....