ಎರೆಹುಳು.......
ಹೊರಳುತಿದೆ ಕೆರಳಿ,ಮನಸು.ತೆವಳಿ ಜಾರುತಿದೆ,
ಸಾಗುತಿದೆ ದೂರ ಸಾವಕಾಶವಾಗಿ, ಸಮನಾಂತರವಾಗಿ
ಆಮೆ,ಎರೆ ಹುಳು ನಡುವೆ ಹಿಂದೇ ಉಳಿದು 
ಗೆಲ್ಲುವ ಓಟದ ಪೈಪೋಟಿ.
ನೆಲಕೆಳಗಣ ವಿಶಾಲ ಮೈದಾನ ಕಗ್ಗತ್ತಲು
ಹೊನಲು ಬೆಳಕಿನ ಸಿದ್ದತೆ ಆಗಿಲ್ಲ
ನೇತ್ರಹೀನ, ದಿಕ್ಕಿಲ್ಲದ ನೋಟದ ಸಮಕೋನದಲ್ಲಿ
ಕೊರೆಯುವ ಸುರಂಗ, ಮರೆತೇ ಹೋಗಿದೆ ಸ್ಪರ್ಧಿ
ಮಣ್ಣುಕಣಗಳ ಮಬ್ಬಲ್ಲೇ ನೂಕಿ ಮುನ್ನುಗ್ಗಿ
ಕೆದರಿ, ಬಿರುಗೂದಲು ಚಾಚಿ ಸಾಧಿಸಿ ಹಿಡಿತ
ಮೇಲೇರುವ ತವಕ, ಬತ್ತಿಲ್ಲ ಇನ್ನೂ ಉತ್ಸಾಹದ ಒರೆತ
ಬೆಳಕ ಹಿಡಿಯಲು ಬೊಗಸೆಯೊಳಗೆ, ಉಳಿಯುವುದಿಲ್ಲ ಖಚಿತ
ಸರಾಗ ಸಾಗುತಿದೆ.....ಭ್ರಮೆ.ನಿರಸನದಿಂದ ದೂರ.
ದೂರ,ಕತ್ತಲ ಸಾಮ್ರಾಜ್ಯದಲಿ ಅಧಿಪತಿಯ ಗಸ್ತು,
ಎಲ್ಲವು ಶಾಂತ ಬಿರುಗಾಳಿಯ ಮುನ್ನ,
ಗುಡುಗಿಲ್ಲ, ಸಿಡಿಲಿಲ್ಲ,ಮೋಡವಿನ್ನು ಬಿರಿದಿಲ್ಲ.
ಭಯವಿಲ್ಲ, ಮಳೆಸುರಿದು,ಪ್ರವಾಹ ಉಕ್ಕುವುದಿಲ್ಲ
ನಾನು ಮುಳುಗುವುದಿಲ್ಲ, ಕೊಚ್ಚಿಹೋಗುವುದಿಲ್ಲ,
ಉಸಿರುನಿಲ್ಲುವುದಿಲ್ಲ, ಚರ್ಮಹಸಿ ಇರುವತನಕ.
ಮಣ್ಣ ನುಂಗಿದ ಗತಕಾಲದ ಅನಾದಿ ಅಸ್ತಿ ಅಸ್ತಿತ್ವ
ಪಿಸುಗುಡುವ ಸದಾ ಗೊಡ್ಡು ತತ್ವ
ಯಾರೋ ಕರುಣಿಸಿದ ಫತ್ವಾ.
ಅಂದೇರಿ ನಗರದ ರಂಧ್ರಮಯ ರಾಜ ಬೀದಿಗಳಲ್ಲಿ,
ಮೌನ ಸಂಗೀತದಲಿ ಸಂಭ್ರಮದ ನಾಟ್ಯ ಹೆಜ್ಜೆ
ಓಲಗದ ಸಂಗೀತದಲಿ,ಮಣ್ಣ ವಾಸನೆಯ ಘಮ,
ಬಲೆಯ ಸಂಕೀರ್ಣ ದಾರಿಗಳಲ್ಲಿ, ಕತ್ತಲ ಪಲ್ಲಕ್ಕಿ
ಗಿರಕಿ ಹೊಡೆಯುತಿದೆ ಸಿಕ್ಕಾಗಿರುವ ರಸ್ತೆ ಬಲೆ
ಉಂಗುರ ಕಾಯದ ಮೆರವಣಿಗೆ ನೆಲಮಾಳಿಗೆಯಲ್ಲಿ
ಸುರಂಗ ಚಕ್ರಾಧಿಪತಿ ಪಥಸಂಚಲನ,
ಹಸಿಯಾದ ನೆಲ ಬಿರಿದು ಬಿರುಕು,
ನಸುಕೇ ಇಲ್ಲದ ಉಸುಕು ಬದುಕು,
ಕಣ್ಣಾಗಿದೆ ಬಾಯಿ, ಮಣ್ಣಾಗಿದೆ ಕರಳು,
ಹುಣ್ಣಾಗಿದೆ ಮಿದುಳು, ಹಣ್ಣಾಗಿದೆ ಬಾಳು,
ನೀನೆ ಹೇಳು, ನಾನೇ ಅವಳೂ, ಅವಳೂ ನಾನೇ,
ವಿಕಾಸದ ವಿಕಟನಗೆಯಲಿ ನಾನು ಸಮಲಿಂಗಿ,
ಹೌದು.. ದ್ವಿಲಿಂಗಿ ನಗಬೇಡ ಕಮಂಗಿ
ಹಾದರದ ಬದುಕಲ್ಲಿ ಪಾಪವೆಲ್ಲಿಯ ಲೆಕ್ಕ?
ಹೌದೋ ಮುಕ್ಕಾ.....ಅಹಂ ಬ್ರಹ್ಮಾಸ್ಮಿ ...
ಸತ್ಯಂ, ಶಿವಂ, ಸುಂದರಂ.......

Comments

Popular posts from this blog

ಕಾಗೆ....