ಪ್ರಸ್ತುತ 
ಎಲ್ಲರೂ ತಮ್ಮ, ತಮ್ಮ, ನಿಲುವಿನ, ಸಿದ್ಧಾಂತದ, ನೀತಿಯ, ಧರ್ಮದ, ದೇವರ, ಮನುಕುಲದ ಏಳಿಗೆಯ ಆದರ್ಶಗಳ ಉನ್ಮಾದದಲ್ಲಿ ಅವರದೇ ಶ್ರೇಷ್ಟತೆಯ ಭವ್ಯ ಸಾರಭೌಮತ್ವವನ್ನು ಎಲ್ಲೆಕಡೆಯೂ ಶಾಶ್ವತವಾಗಿ ಸ್ಥಾಪಿಸಲು ತೀರಾ ಉತ್ಸುಕರಾಗಿರುವ ಮಂದಿಯಿಂದ ತುಂಬಿತುಳುಕುತ್ತಿರುವ ಈ ಪುಟ್ಟ ಗ್ರಹದಲ್ಲಿ...ಯಾವುದೂ ಸರಿ ಇಲ್ಲ, ಸರಿ ಇರಲಿಲ್ಲ, ಇರುವುದೂ ಇಲ್ಲ....ಈ ಸಮಾಜದಲ್ಲಿ, ಪರಿಪೂರ್ಣ ಸಾಮಾಮತೆ ಎನ್ನುವ ಯೋಚನೆ ನಮ್ಮ ಆಳುವ ಮನಸ್ಸಿನ ಅಭಿವ್ಯಕ್ತಿಗಳು ಅಷ್ಟೇ. ಒಂದುವೇಳೆ ಆದು ಇದೆ ಅಥವಾ ಇರಬಹುದು ಅಥವಾ ಉಂಟುಮಾಡುತ್ತೇವೆ ಎನ್ನುವುದು ಮನುಷ್ಯಚಿಂತನೆಯ ಸಂಕುಚಿತ ಜ್ಞಾನವನ್ನು ತೋರಿಸುತ್ತದೆ. ಇದು ಅಸಹಜ, ಅಪ್ರಾಕೃತಿಕ. 
ಎಲ್ಲವೂ ಸರಿಯಾಗಿದೆ ಅಥವಾ ಸರಿಯಾಗಿಸುತ್ತೇವೆ ಎಂಬ ಯಾರೊಬ್ಬರದೇ ಆದ ಭ್ರಮೆ ಪರಿಪಕ್ವ ಮನಸಿನ ಮಾಪಕವಲ್ಲ. ಯಾವುದೂ ಸರಿ ಇಲ್ಲ, ಅದರೆ ಇದೇ ಸರಿ ಹಾಗೂ ಇದು ಎಲ್ಲವೂ ಹೀಗೆ....ಈ ಸ್ಥಿತಿಯೇ ವಾಸ್ತವ. ಅಸ್ತಿತ್ವ ಅಸಂಗತ, ಬದುಕು ಯಾರಿಗೂ ಸಿಗದ ಸರಳ ಸಮೀಕರಣ. ಬಿಡಿಸಲು, ಶೂನ್ಯವಾಗುವ ಭಾಗಕಾರದಲ್ಲಿ ಗಣಿತ ಅಗಣ್ಯ. ಇಂದು ಕಾಣುವ ಈ ಪ್ರಪಂಚದ ತೀವ್ರ ಪ್ರಕ್ಷುಭ್ದ ಸ್ಥಿತಿ ವಿಕಾಸದ ಒಂದು ಅನಿವಾರ್ಯ ಉಪಕರಣ. ಈ ಘಟ್ಟದ ಘಟನೆಗಳಲ್ಲಿ ಹೋರಾಟದ ಸ್ವರೂಪಬದಲಾಗಿದೆ ಅಷ್ಟೇ.
ನಿಲ್ಲದ ಪರಿಸರದ ಏರುಪೇರುಗಳು, ಸತತ ಬದಲಾಗುವ ಚಂಚಲ ಪರಿಸರ. ಅದಕ್ಕನುಗುಣವಾಗಿ ವಿಕಾಸದ ನಿರಂತರತೆಯನ್ನು ಯಾವುದೋ ಸಿದ್ದಾಂತ, ತತ್ವ, ಆದರ್ಶಗಳ ಚೌಕಟ್ಟಿನಲ್ಲಿ ನೇತುಹಾಕಿ ಭಜನಾ ಮಂಡಳಿಯನ್ನು ತೆರೆದು ಇತಿಹಾಸವಾಗಿಸಿ ನಮ್ಮ ಸೀಮಿತ ಪ್ರಜ್ಞೆಯನ್ನು ಮೆರೆಯುವುದು, ಈಗಿನ ಅತಿವಿವೇಕಿ, ಮಾನವಪ್ರೇಮಿ ಅಂದುಕೊಂಡಿರುವ ಮಾನವನ ದುರಂತ.
ಮನುಷ್ಯ ತಾನೆಂದುಕೊಂಡಷ್ಟು ಬುದ್ದಿವಂತನಲ್ಲ.ಕಾರಣ ಅವನು ಕೇವಲ ಮಾನವಪ್ರೇಮಿ ಮಾತ್ರ. ಅವನ ಯೋಚನೆಯಲ್ಲಿ, ಯೋಜನೆಯಲ್ಲಿ ಜೀವಿಪ್ರೇಮ ಎಂಬ ಅರಿವು, ಜಾಗೃತಿ ಇನ್ನೂ ಉಂಟಾಗಿಲ್ಲ. ಜೀವಿಗಳಿಗೆ ಬದುಕಲು ಬುದ್ದಿಬೇಕಿಲ್ಲ.ಸಾಯದೇ ಜೀವಂತ ಉಳಿಯುವುದು ಸಹಜಪ್ರವೃತ್ತಿ. ಹೋರಾಟ, ಪೈಪೋಟಿ ಎಲ್ಲಾಜೀವಿಗಳಿಗೂ ಅನ್ವಯಿಸುತ್ತದೆ ಹಾಗೂ ಇದು ಅನಿವಾರ್ಯಕೂಡ. ಏಷ್ಟೇ ಪ್ರಗತಿಶೀಲ ಅಂದು ಕೊಂಡರೂ.....ತಾತ್ಕಲಿಕ ಇರುವಿಕೆಯ ಇತಿಮಿತಿಯಲ್ಲಿ ಅನೂಹ್ಯವಾದ ಈ ಅನಂತಕಾಲವನ್ನು, ಅದರ ಗತವನ್ನು, ಭವಿಷ್ಯವನ್ನು ಈ ಕ್ಷಣದಲ್ಲಿ ಶಾಶ್ವತಗೊಳಿಸುವ ಜನರ ನಡುವೆ ಬದುಕುತ್ತಿದ್ದೇವೆ.

Comments

Popular posts from this blog

ಕಾಗೆ....