ಅತೃಪ್ತ.
ಖಾಲಿಯಾಗಬೇಕಿದೆ, ಸಂಪೂರ್ಣವಾಗಿ,
ಅಡಿಯಿಂದ ಮುಡಿಯವರೆಗೆ
ಕಲ್ಪನಾತೀತ ಗತಕಾಲದ ಅನುವಂಶೀಯತೆ
ಕೊಬ್ಬಿರುವ ಸ್ಥೂಲ ದೇಹದಲ್ಲಿ, ಅದೇ ಮಿದುಳು
ವಕ್ರ ಮೇಲ್ಮೈಯಲ್ಲಿ ಅಗಣಿತ ನರತಂತು
ಗ್ರಾಹಕದ ಸ್ವೀಕೃತಿಗೆ ತಿರುಗಿ ಬೀಳದೆ
ಬದ್ದ ಪ್ರಾಮಾಣಿಕ ಬೆಳಕು,ವಿಕಿರಣದಲಿ ಥಳಕು
ಹಸಿರಲ್ಲಿ ಉಸಿರಾಡಿ ಸೂರ್ಯ ನುಂಗುವ ರಾಹು, ಕೇತು.

ಪ್ರಚೋದನೆ, ಪ್ರತಿಕ್ರಿಯೆ ವಿರೋದಾಭಾಸ,
ಕೆಸರ ಬಸಿರಾಗಿರುವ ಕುಲಾಂತರಿ ವಿಷ ಗಾಳಿ
ದಿಕ್ಕುತಪ್ಪಿ ರಾಧ್ದಾಂತ,ರಗಳೆ ಕೆಟ್ಟ ಮಿಶ್ರತಳಿ
ಬಣ್ಣಬದಲಾಗಿದೆ, ಪಂಚಭೂತ
ಅನಿವಾರ್ಯ, ಅನಿಯಮಿತ ಸ್ಥಾನಪಲ್ಲಟ
ನಿಯಮ ಪಾಲಿಸದ , ಋತುಮಾನಗಳು
ಸ್ವೇಚ್ಛಾಚಾರ ಮೆರೆದ ಮೆರವಣಿಗೆ,
ನಾಗರೀಕ, ಸಂಸ್ಕೃತಿಗೆ ಮುಕ್ತ ಬರವಣಿಗೆ.

ಇರಬೇಕು, ಗಿಡ, ಮರ, ಪ್ರಾಣಿ,ಪಕ್ಷಿಗಳಂತೆ
ಅಗೋಚರ ಸಮುದಾಯ ಅಣುಜೀವಿಗಳಂತೆ
ಬೇಕಿಲ್ಲ, ವಂಶದ ಹಂಗು, ಮನೆತನ ಬಿರುದು,
ಕುಲಗೌರವ ಭವ್ಯತೆ, ವಂಶಕೀರ್ತಿಯ ಹೊರಲಾರದ
ಕಿರೀಟದ ಹೊರೆ, ಹೆಣಭಾರ,ಸಂಸ್ಕಾರ,
ಮಾನವತೆ ಪುರಸ್ಕಾರಕ್ಕೆ ತಕ್ಕ ತಿರಸ್ಕಾರ.

ಇಳಿಸಬೇಕಿದೆ, ನಿರ್ಮೋಹದಲ್ಲಿ,
ದೇಶ, ಧರ್ಮ, ಜಾತಿ ವರ್ಗೀಕರಣದ ಸನ್ಮೋಹನದಲ್ಲಿ
ಬೇಕಿಲ್ಲ ವಿಶಿಷ್ಟ ಮೀಸಲಾತಿ ನಾಮಕರಣ
ಮನುಕುಲದ ಜೈವಿಕ ಅಜ್ಞಾನ, ಜಾಣಮುಗ್ಧತೆ ಕಾರಣ
ಶ್ರೇಷ್ಟತೆಯ ಜೇಷ್ಟತೆಯ ಮಹಾ ಕುಚೇಷ್ಟೆ
ಸಹಜೀವಿಗಳ ಮಾರಾಣಾಂತಿಕ ಶೋಷಣೆ
ತಡೆಯಿಲ್ಲ ಅಮಾಯಕರ ಮಾರಣಹೋಮ
ನಮ್ಮ ದೇವರ ನಿಸ್ವಾರ್ಥ,ನಿಷ್ಕಾಮ ಪೂಜೆಗೆ
ಅಸಹಾಯಕ ಪ್ರಭೇಧ ದಾರುಣ ಬಲಿ.

ಪ್ರಗತಿಯ ಉತ್ತುಂಗ, ಶಿಖರ ಮೆಟ್ಟಿದ ಸಾಧನೆ
ಕೀರ್ತಿಪತಾಕೆ ಹಾರಿಸಿ ಆರೋಹಣದಲಿ ದಾಖಲೆ
ಇಳಿಯಲೇ ಬೇಕು ತುದಿಯಿಂದ ವಿದೂಷಕ
ತಲುಪಲೇಬೇಕು ತಳ ನೆಲದ ಸಂಸಾರದಲ್ಲಿ
ಅವರೋಹಣದಲ್ಲೇ ನಿಜ ಬದುಕು, ಮಣ್ಣಲ್ಲಿ.

ಅಸಹಜ, ಅನಿವಾರ್ಯ ಮರೆವಿಗೆ, ಹೊಸ ನೆನಪು
ಜ್ಞಾನೇಂದ್ರಿಯಗಳ ಕಲಿಕಾ ಮರುತರಬೇತಿ ಅನಗತ್ಯ
ಕಲಿಯಬೇಕಿದೆ ಪದವಿಲ್ಲದ ಹೃದಯ ಭಾಷೆಯನ್ನು
ಅಹಂ ಇಲ್ಲದ ಅಕ್ಷರಗಳ ಹೊಸವರ್ಣಮಾಲೆಯಿಂದ
ಉಸಿರಾಟ ಅನಿವಾರ್ಯ, ಇದೇ ಪರಿಸರದಲ್ಲಿ
ನೆನೆಯಬೇಕಿದೆ, ಸಿಗುವಷ್ಟೇ ನೀರಲ್ಲಿ ಬಸಿದ ಗಂಗೆ
ಇರುವಿನಲ್ಲೇ ಇರಬೇಕು, ವರ್ತಮಾನ
ಇಲ್ಲದಾಗಬೇಕಿದೆ ನಾವೇ ನಾವಾಗಿ,
ನಮ್ಮಪಾಲಲ್ಲಿ,ಸರಳ ಜೀವಿಗಳಾಗಿ.

Comments

Popular posts from this blog

ಕಾಗೆ....