ಕೊರಗಜ್ಜ, ದೈವ, ಪರಿಸರ ಇತ್ಯಾದಿ...

ಕೊರಗಜ್ಜ, ದೈವ, ಪರಿಸರ ಇತ್ಯಾದಿ...

ಕೊರಗಜ್ಜ, ದೈವ, ಪರಿಸರ ಇತ್ಯಾದಿ...

ಮೊದಲು ಕೇಳಿರಲಿಲ್ಲ ಈ ದೈವದ ಹೆಸರು, ಹರಕೆ ಹೊರುವ ಮಂದಿ ಕಂಡಿರಲಿಲ್ಲ ಇಲ್ಲಿ....ಸುಮಾರು ಸಮಯದ ಮುಂಚೆ ಅಂದರೆ ನಾಲ್ಕು ದಶಕಗಳಹಿಂದೆ ನಾನಿಲ್ಲಿಗೆ ಬಂದಾಗ. ಈಗಿನ ಮನೆ,ಮನೆಯ ಮಾತಾಗಿರುವಈ ತಾತನ ಬಗ್ಗೆ ಕೇಳಿರಲಿಲ್ಲ.ಅತಿ ಜನಪ್ರಿಯ ಪ್ರೀತಿಯ ದೈವಶಕ್ತಿ ಆಗಿರಲಿಲ್ಲ...ಘಟ್ಟದ ತಳದ ಕಡಲ ಗಡಿಯ ಒಳನಾಡಿನಲ್ಲಿ. ಕಡಲತಡಿಯ ಸಾಮಾನ್ಯರಿಗೆ ಅರಾಧ್ಯ ಪೂಜ್ಯ ಇಂದು. ದೇವರಷ್ಟೇ ಭಕ್ತಿ,ಜನಪ್ರಿಯತೆ ಹೊಂದಿರುವ ದೈವಾಂಶ ಇರುವಿಕೆ ಈ ಪ್ರದೇಶದಲ್ಲಿ ಈಗ...ಎಲ್ಲಾ ಬಸ್, ಆಟೋಗಳ ಹಿಂದೆ....ಸ್ವಾಮಿ ಕೊರಗಜ್ಜ ಅನ್ನುವ ಸಾಲು ತೀರಾ ಸಾಮಾನ್ಯ ವಾಗಿದೆ.

ಈ ಅಜ್ಜ ಆಗ ಎಲ್ಲಿದ್ದ. ಈಗ ಬಂದ ಎಲ್ಲಿಂದ?, ಇದ್ದಕ್ಕಿದ್ದಹಾಗೆ ಎಲ್ಲರಬಾಯಲ್ಲೂ ನೆಲಸಿ, ನೆಚ್ಚಿನ ಕಿಚ್ಚನ್ನು ಹಚ್ಚಿರುವ ತಪಸ್ವಿಯಾರು? ಆಶ್ಚರ್ಯ ಪಡಬೇಕಿಲ್ಲ...ನಿಖರಾವಾಗಿ ಈ ದೈವದ ಇತಿಹಾಸ ಗೊತ್ತಿಲ್ಲ ನನಗೆ. ಪ್ರಯತ್ನಿಸಿದೆ. ಒಂದು ಮೂಲದ ಪ್ರಕಾರ ಈ ಕೊರಗಜ್ಜ ರೈತರ ಹಟ್ಟಿಯಲ್ಲಿನ ಜಾನುವಾರುಗಳ ರಕ್ಷಣೆ ಮಾಡುವ ಆಪದ್ಭಾಂದವ ಎಂಬ ಜಾನಪದ ಕಥೆಯಲ್ಲಿ ಬರುವ ದೈವಾಂಶ. ಹೀಗಾಗಿ ಹಸುಗಳಿಗೆ, ಎಮ್ಮೆ ಅಥವ ಎತ್ತುಗಳಿಗೆ, ಕೋಳಿ ಇತ್ಯಾದಿ ಸಾಕುಪ್ರಾಣಿಗಳಿಗೆ ಯಾವುದೇ ರೋಗಬಂದರೂ ಕೊರಗಜ್ಜನಿಗೆ ಮೊರೆಹೋಗುತ್ತಾರೆ. ಕೆಲವರು ಭೂತಾರಾಧನೆಯ ಕಲ್ಪನೆಯ ರೂಢಿಯಲ್ಲಿತ್ತೇನೋ ಗೊತ್ತಿಲ್ಲ. ಗ್ರಾಮೀಣ ನಂಬಿಕೆ, ಸಂಪ್ರದಾಯ, ಪದ್ದತಿ ಆಚರಣೆ ಕೊರಗಜ್ಜನ ಬಗ್ಗೆ ಈಗ ಎಲ್ಲರಿಗೂ ಗೊತ್ತು...

ಎಲ್ಲರಿಗೂ ಸಿಗುವ ಅತಿ ಸರಳ ದೇವರು, ದುಬಾರಿ ಹರಕೆ ಬೇಡ. ತಲೆ ಕೂದಲು ಬೇಡ. ಪ್ರದಕ್ಷಣಿಯೂ ಅನಿವಾರ್ಯವಲ್ಲ ಗುಡಿಯೇ ಇಲ್ಲದಾಗ. ಚಿನ್ನದ ಕವಚ, ವಜ್ರದ ಮುಕುಟ, ಕಿರೀಟ ಎನೂ ಇಲ್ಲದೆ ಎಲ್ಲರ ಇಷ್ಟ ಸಿದ್ಧಾರ್ಥಿ ಮಾಡುವ ದೈವಾಂಶ ಕೊರಗಜ್ಜ. ಕೇಳುವುದಾದರೂ ಏನು? ನಿನ್ನ ಏಳಿಗೆಗೆ ! ನಿನ್ನಎಲ್ಲೆಇಲ್ಲದ ಮಿತಿಗೆ ?

ವಿದ್ಯಾರ್ಥಿ ಯಾದರೂ ಕೇಳಿಯಾನು ತಾನು ನಪಾಸಾಗದಿರಲೆಂದು. ಆಸೆ ನೆರವೇರಿದರೆ ಹಾರೈಕೆ ಏನು..? ಒಂದು ಕ್ವಾರ್ಟರ್ ಅಥವಾ ಬಾಟಲ್ ಹೆಂಡ, ಜೊತೆಯಲೊಂದು ಪ್ಯಾಕ್ ನಿನ್ನ ಇಷ್ಟದ ಸಿಗರೇಟ್, ತಿಂಡಿಗಳು...ಕೋಳಿಯ ಬಲಿಗೆ ಅವಕಾಶವಿದೆ....ಇಲ್ಲದಿದ್ದರೂ...ಅಡ್ದಿ ಇಲ್ಲ....ಕೇಳಲು ಬರುವುದಿಲ್ಲ ಯಾರೂ. ಆದರೆ ದ್ರೋಹ ಬಗೆಯಲಾರರು ಇಲ್ಲಿನ ಮೊಮ್ಮಕ್ಕಳು ತಾತನಿಗೆ. ನೀಯತ್ತಲ್ಲೇ ತೀರುತ್ತದೆ ಎಲ್ಲರ ಅಗ್ಗದ ಬಡ ಹರಕೆ. ಎಲ್ಲರೂ ಪ್ರಾಮಾಣಿಕರು, ಇವರ ಬೇಡಿಕೆಗಳು ತೀರಾ ಸರಳ, ಮುಗ್ಧ. ಇಷ್ಟಾರ್ಥ ಸಿದ್ಧಿಯಾದಮೇಲೆ ಸಂದಾಯವಾದರೆ ಸಾಕು ಕೊರಗಜ್ಜನ ಹರಕೆಯ ಬಾಕಿ.

No hard feelings and brooding.....ಕೊರಗುವುದಿಲ್ಲ ಕೊರಗಜ್ಜ.... you know... ಹಲುಬುವುದಿಲ್ಲ, ಖಂಡಿತಾ ಶಾಪ ಕೊಡುವುದಿಲ್ಲ ಯಾರಿಗೂ. ನಿರಾಸೆಯಲ್ಲೂ ತನ್ನ ಭಕ್ತರೇ ಅಜ್ಜನನ್ನು ನಿರ್ಲಕ್ಷಿಸುವುದಿಲ್ಲ. ತಮ್ಮ ಇಷ್ಟಾರ್ಥ ಸಿದ್ಧಿಯಾಗದಿದ್ದರೂ....ಭಕ್ತರಿಗೆ ಬೇಸರವಿಲ್ಲ...ದೈವವನ್ನು ದೂರುವುದಿಲ್ಲ...ದೇವಸ್ಥಾನವಿಲ್ಲ. ಪ್ರತಿಮೆಯೂ ಇಲ್ಲ....ಮುಖವಾಡ ಅಥವಾ ತ್ರಿಶೂಲ.......ಖಡ್ಡಾಯ ವಲ್ಲ! ಸಾಂಕೇತಿಕ ಅಥವಾ ಸಾಮಾನ್ಯವಾಗಿ ಕಂಡುಬರುವ ಕಾಣೀಕೆ ಡಬ್ಬಿ. ಈ ಅಜ್ಜನಿಗೆ, ಕಾಣಿಕೆ ಡಬ್ಬಿಯೇ ಭವ್ಯಮಂದಿರ....ಅದರೇ ಅಷ್ಟೇ ಇದಕ್ಕೂ ಅದೇ ಭಕ್ತಿ ಭವ್ಯ ಮಂದಿರದ ಮೂರುತಿಯ ಹಾಗೆ.....,ಹಳ್ಳಿಗಳ ಪಂಚಾಯತಿಯ ರಸ್ತೆ ಮೂಲೆಗಳಲ್ಲಿ. ಊರ ಹೊರಗಿನ ಧ್ವಜಸ್ಥಂಬದ ಪಕ್ಕದಲ್ಲಿ ಇರುತ್ತಾನೆ ಈ ಕೊರಗಜ್ಜ. ತನ್ನ ಇಲಿಯ ಪಂಜರದಂತಹ ಸಣ್ಣ ಮನೆಯಲ್ಲಿ, ಜಾಲರಿಯಂತಹ ಅಂಚೆಪೆಟ್ಟಿಗೆಯಲ್ಲಿ ಅಮೂರ್ತವಾಗಿ ಕಾಣಿಕೆಡಬ್ಬಿಯಲ್ಲಿ. ಎಲ್ಲರ ಗಮನಿಸುತ್ತಾನೆ ಅಗೋಚರದಲ್ಲಿ. ಹಾದು ಹೋಗುವ ಜನರ ಭಕ್ತಿಅಪಾರ, ಚಪ್ಪಲಿ ಕಾಲುದಾರಿಗೆ ಸೇರಿಸಿ, ಪೆಟ್ಟಿಗೆ ಮುಟ್ಟಿಯೇ ನಮಿಸುತ್ತಾರೆ ನಿರಾಡಂಬರದ ನಿಜ ಭಕ್ತಿಯಲಿ ಊದಿನಕಡ್ಡಿ ಹತ್ತಿಸಿ, ಹೂ ಮುಡಿಸಿ...ಹಾರ ಹಾಕಿ ...ತಮ್ಮ ಕೈಲಾದ ಕಾಣಿಕೆಯನ್ನು ಸಲ್ಲಿಸುತ್ತಾರೆ.....ತಮ್ಮ ಇತಿಮಿತಿಯ ಪ್ರಾರ್ಥನೆಗಳಲ್ಲಿ ಬೇಡಿಕೆ ಬಲು ಅಗ್ಗ. ಈಗ ಅಜ್ಜ ಬಹಳ ಜನಪ್ರಿಯವಾದುದರಿಂದ ಭಜನಾ ಮಂಡಳಿ, ಗುಡಿ ಎಲ್ಲವೂ ವ್ಯವಸ್ಥಿತವಾಗಿ ನಿರ್ಮಾಣವಾಗುತ್ತಿದೆ. ಹಲವು ದಂತ ಕಥೆಗಳಿವೆ. ಅದರ ಪ್ರಸ್ಥಾಪ ನನ್ನ ವಿಷಯವಲ್ಲ....ಇನ್ನೊಮ್ಮೆ...ನೋಡುವ....ಅದರ ಬಗ್ಗೆ....ಬದಲಿಗೆ

ಇದು ಭಾರತ...ದೇವರು, ದೇವತೆಯನ್ನು ಬದಲಿಸುತ್ತೇವೆ ಆಗಾಗ...ವಾಹನ ಅಥವಾ ಯಾವುದೋ ವಸ್ತುಗಳನ್ನು ಬದಲಿಸುವಂತೆ..ಕಾಲ,ಕಾಲಕ್ಕೆ! ಎಲ್ಲಕ್ಕೂ ಎಕ್ಸಪೈರಿ ಡೇಟ್ ಉಂಟು. ಕೀಳರಿಮೆ ಯಾಕೆ? ಎಲ್ಲರೂ ದೇವರೇ....ಒಬ್ಬ ಸಾಮಾನ್ಯ ಮಾನವನಿಗೆ ಅಸಾಧ್ಯವಾದುದನ್ನು ನಿಭಾಯಿಸಬಲ್ಲ ಅಗೋಚರ ಸಾಮರ್ಥ್ಯಕ್ಕೆ ದೇವರಂತಹ ಮಾನವ ಅಥವ ದೈವಮಾನವ (Godman) ಎಂಬ ಮನ್ನಣೆ ಕೊಡುವ ಸಂಸ್ಕೃತಿ ನಮ್ಮದು...ಅಸಾಧ್ಯ ವಾದುದನ್ನುಸಾಧ್ಯ ಮಾಡಬಲ್ಲ ಶಕ್ತಿ, ವ್ಯಕ್ತಿ ಆಗಿರಲೂ ಸಾಕು, ಒಪ್ಪುತ್ತಾರೆ ಜನ. ದೈವರೂಪದಲ್ಲಿ ಅಮೂರ್ತದಲ್ಲೂ ಸ್ವಾಗತ ನಮ್ಮಿಂದ ಆ ಅಗೋಚರ ಶಕ್ತಿಗೆ....ಪರಿಸರದ ಇರುವಿಕೆಯ ತಂತ್ರಕ್ಕೆ.
ಕೆಲವೊಮ್ಮೆ ನನಗೂ ಅನಿಸಿದ್ದುಂಟು....ಈಗ ಚಾಲ್ತಿಯಲ್ಲಿರುವ ತಮ್ಮ ಮನೆ ದೇವರನ್ನು ಬಿಟ್ಟು ಮತ್ತು ಅಸಂಖ್ಯಾತ ದೇವತೆಗಳ ಪಾರಂಪರಿಕ ಪೂಜೆ, ಹಾರೈಕೆಯ ನಡುವೆಯೂ ವಿಚಲಿತನಾಗದೆ ಹೊಸ ಅಪರಿಚಿತ ಯಾವುದೋ ಜಾಗದ ದೇವರ ಮಹಿಮೆಯನ್ನು ಕೇಳಿ ಮೊರೆಹೋಗುತ್ತಾನೆ...ಆದರೆ ತನ್ನ ನಂಬಿಕೆಯನ್ನು ಕಳೆದುಕೊಳ್ಳದೆ, ಯಾವ ಪಾಪ ಪ್ರಜ್ಞೆ ಇಲ್ಲದೆ...ಆದರೆ...ತಿಳಿದು ಬಂದ ಆ ಪ್ರದೇಶದ ಮಹಿಮಾಶಕ್ತಿ ಅಥವಾ ಪವಾಡಗಳಬಗ್ಗೆ, ಅಲ್ಲಿಯ ಜನಗಳ ನಂಬಿಕೆಗೆ ತೋರುವ ಗೌರವ ಮತ್ತು ತನ್ನ ಸ್ವಾರ್ಥ......ಯಾರಿಂದಲೋ ತಿಳಿದು...... ಬೇಡಿಕೆಯಲ್ಲಿರುವ, ಹೊಸ ಅತಿ ಜನಪ್ರಿಯ ದೇವರ ಆಯ್ಕೆ ಜನಗಳಲ್ಲಿ ಯಾಕೆ....? ಅದನ್ನು ಅವರು ಹೇಗೆ ಸ್ವೀಕರಿಸಿ ಸಮರ್ಥಿಸಿಕೊಳ್ಳಬಹುದೆಂಬ ಯೋಚನೆ...ವಿಚಿತ್ರ... ಆದರೆ ಅವರಿಗೆ ಸಮರ್ಥನೆಯ ಅಗತ್ಯವೇ ಇಲ್ಲ. ಅವರ ಅಚಲ ನಂಬಿಕೆ ಮತ್ತು ಭವಿಷ್ಯದ ಅನೂಹ್ಯ, ಅನಿರೀಕ್ಷಿತ ಬದುಕಲ್ಲಿ ಯಾವುದಾದರೊಂದು ಆಸರೆ ಬೇಕು ಎಲ್ಲರ ಮನಸ್ಠೈರ್ಯಕ್ಕೆ...ಅವನ ಬದುಕಿಗೊಂದು ಹೊಸ ಮೋಟಿವೇಷನ್ ಬೇಕು ನಾಳಿನ ಕನಸುಗಳಿಗೆ....ಎಲ್ಲವೂ ಮಾನವನಿಂದ ಅಸಾಧ್ಯ ಹಾಗೂ ಪುರುಷ ಪ್ರಯತ್ನದ ಇತಿಮಿತಿಯನ್ನು ಸ್ವೀಕರಿಸುವ ಸರಳ ವಾಸ್ತವದ ಅರಿವಿದೆ ಈ ಜನಗಳಿಗೆ. ಕೆಲವರು ಈ ವಾಸ್ತವವನ್ನು ಹಂಗಿಸಿ, ಬೊಟ್ಟುಮಾಡಿ ತೋರಿಸಿದಾಗ ನನಗೂ ಕೆಟ್ಟದು ಮತ್ತು ವಿಚಿತ್ರ ಅನಿಸಿತು...ನನ್ನ ಬಳಿ ಉತ್ತರವಿರಲಿಲ್ಲ, ಎಂದೂ ಯೋಚಿಸಿರಲಿಲ್ಲ....ಹೇಗೆ ಇವರ ಸ್ವಾಮಿ ಭಕ್ತಿ ಸಮಯ,ಸಮಯಕ್ಕೆ ಬದಲಾಗುತ್ತದೆ ಇಂದಿನ ರಾಜಕೀಯ ನಾಯಕರುಗಳ ರೀತಿ.... ಇವರ ಅವಶ್ಯಕತೆಗೆ ತಕ್ಕಹಾಗೆ. ತಮ್ಮ ಮೂಲ ಮನೆದೇವರನ್ನು ನವೀಕರಣ ಅಥವಾ ದರ್ಶನ (Renewal) ಮಾಡಿಸುವುದಲ್ಲದೆ ಜೊತೆಗೆ ಹೊಸ ದೇವರನ್ನು ತಮ್ಮ ಖಾತೆಗೆ ಸೇರಿಸಿಕೊಳ್ಳುತ್ತಾರೆ. ಅತಿ ವಿಚಿತ್ರ ಅನಿಸಿತ್ತು...ಆದರೆ ಪರಿಸರ ಸಕಲ ಅಂಶಗಳಲ್ಲಿರುವ ತಮ್ಮ ಬದುಕಿಗೆ ಪೂರಕವಾದ ಶಕ್ತಿ ಇದೆ ಎಂಬ ಅರಿವು ಅವರ ಅರಿವಿಗಿಲ್ಲದೇ ಅರಿತಿದ್ದಾರೆ ಅನಿಸುತ್ತದೆ ಈ ಅಮಾಯಕರು.

ಆದರೆ ಮುಗ್ಧಜನಗಳ ನಂಬಿಕೆಯ ಹಿಂದೆ....ಅಪಾರ ಪರಿಸರ ಜ್ಞಾನ ಇದೆ...ಎಂದು..ನನ್ನ ಅನಿಸಿಕೆ ಅಥವಾ ವಿಶ್ಲೇಷಣೆ. ಗೊಂದಲ ಸ್ವಲ್ಪವೂ ಇಲ್ಲ ಭಕ್ತರಿಗೆ...ಅವರ ನಿಷ್ಟೆ ಪ್ರಶ್ನಾತೀತ. ಹೌದು....ನಮ್ಮಲ್ಲಿ...ಹಳ್ಳಿಗೊಬ್ಬ ಗ್ರಾಮದೇವತೆ ಇದ್ದಾಳೆ. ಮಾರಮ್ಮ, ಎಲ್ಲಮ್ಮ, ಮಲೆಯಮ್ಮ.ಸಿದ್ದಮ್ಮ, ಇತ್ಯಾದಿ ಅಸಂಖ್ಯಯ ದೇವತೆಗಳು ಪ್ರತಿಯೊಂದು ಗ್ರಾಮಕ್ಕೂ ಇರುತ್ತದೆ. ಆ ಗ್ರಾಮವನ್ನು ರಕ್ಷಿಸುವ ಶಕ್ತಿ ದೈವ ತಾಯಿ ಎಂಬುದು ಅವರ ಬಲವಾದ ನಂಬಿಕೆ. ಅದನ್ನು ಮರೆಯಲಾರರು...ಪ್ರತಿ ವರ್ಷ ಅ ಹಳ್ಳಿಯದೇ ವಿಶೇಷ ರೀತಿ, ರಿವಾಜುಗಳಲ್ಲಿ ಜಾತ್ರೆಯಲ್ಲಿ ಭಕ್ತರು ತಮಗೆ ಅನಿಸಿದ್ದ ಕಾಣಿಕೆಯನ್ನು ಸಲ್ಲಿಸುತ್ತಾರೆ...ಬಲಿಯಾಗಬಹುದು.....ಆದರೆ...ಜಾತ್ರೆಯ ನಂತರ ದೇವತೆಯನ್ನು ತಮ್ಮ ಹಳ್ಳಿಯ ಗಡಿಯಲ್ಲಿ ಬಿಟ್ಟುಬರುತ್ತಾರೆ, ಮತ್ತೊಮ್ಮೆ ಮಾರನೆಯ ವರ್ಶ ಬರಮಾಡಿಕೊಳ್ಳಲು....ಆ ಹಳ್ಳಿಯಲ್ಲೇ ದೇವಸ್ಥಾನದ ಹನುಮಂತ, ಶಿವ, ವೆಂಕಟೇಶ, ರಾಘವೇಂದ್ರ, ಅಯ್ಯಪ್ಪ, ಸಾಯಿಬಾಬ....ಇತ್ಯಾದಿ....ಇದ್ದರೇ ಅಲ್ಲಿಯೂ ಅದೇ ಭಕ್ತಿ. ವ್ಯತ್ಯಾಸವಿಲ್ಲ ಆ ಗುಡಿಗಳಲ್ಲಿನ ಮೂರ್ತಿಗಳ ಬಗ್ಗೆ.....ಮನಸಿನಲ್ಲೇ ದ್ವಂದ್ವವಿಲ್ಲದಾಗ ಅನುಮಾನ ಎಲ್ಲಿ ಬಂತು..? ಅವರ ಭಾವನೆ. ಬಲವಾದ ನಂಬಿಕೆ...ಮತ್ತೆ ದೇವರಿಗೆ ಯಾವ ಕಂಡಿಶನ್ ಹಾಕುವುದಿಲ್ಲ. ತಮ್ಮ ಭಕ್ತಿಫಲಪ್ರದ ವಾಗಿ ಅವರಿಗೆ ಹಿತವಾದರೆ...ಓ.ಕೆ...ಇಲ್ಲ ಅಂದ್ರೆ ಅವರ ವಿಶ್ವಾಸ, ಭಕ್ತಿ ಕಡಿಮೆಯಾಗುವುದಿಲ್ಲ....ಎಲ್ಲ ದೇವರಿಗೆ ಥ್ಯಾಂಕ್ಸ್ ಹೇಳ್ತಾರೆ, ಮತ್ತೆ ಬರುತ್ತಾರೆ ವಾಡಿಕೆಯಂತೆ, ಮತ್ತೆ ಪ್ರಾರ್ಥನೆ... ಅವರ ಮನೆಯ ಪದ್ದತಿಯಂತೆ. ಯಾರೂ ಸಹಾ ತಮ್ಮದೇ ಮನೆಯಲಿ ಪೂಜಿಸುವವ ದೇವರನ್ನು ಕೈಬಿಟ್ಟು, ತಿರಸ್ಕರಿಸಿ ಇನ್ನೊಬ್ಬ ಹೊಸ ದೈವವನ್ನು ಹುಡುಕಿಕೊಂಡು ಹೋಗಿ ಒಪ್ಪಿಕೊಳ್ಳುವುದಿಲ್ಲ. ಹೊಸ ದೇವರಲ್ಲಿನ ನಂಬಿಕೆ ತನ್ನ ಹಳೆ ದೇವರ ಬಗೆಗಿನ ಯಾವುದೇ ಅಪನಂಬಿಕೆ ಇರುವುದಿಲ್ಲ. ಇವರ ನಡೆ,ನುಡಿ ಒಮ್ಮೊಮ್ಮೆ ವಿಚಿತ್ರ ಅನಿಸುತ್ತದೆ ತಮ್ಮ ಸ್ವಾರ್ಥಕ್ಕಾಗಿ ಹಾರೈಕೆ ಹೊಸ ದೇವರ ಮುಂದೆ ಕೊಂಡೈಯುತ್ತಾರೆ. ಅಂದುಕೊಂಡಿದ್ದ ಮನೋಭಿಲಾಷೆ ಈಡೆರದಿದ್ದರೆ ಅವರು ಯಾರನ್ನು ದೂಷಿಸುವುದಿಲ್ಲ...ಏನೋ ತನ್ನಿಂದಲೇ ಅಪವಾದ ವಾಗಿರಬಹುದೆಂಬ ವಿಧೇಯ ಭಾವನೆ. ಮನಸ್ಸಲ್ಲಿ ಉದ್ವಿಘ್ನತೆ ಇಲ್ಲ. ನಿಶ್ಛಳ ಮನಸ್ಸು...ಹಳ್ಳಿಗಳಲ್ಲಿ ಕೆಲವರು ದೇವರ ಹತ್ತಿರ ಜಗಳವಾಡಿ ಪಂಚಾಯತಿ ಮಾಡುವಷ್ಟು ಅವರ ನಂಬಿಕೆ ಮತ್ತು ಆತ್ಮೀಯ ಸಂಭಂದ ಅವರ ದೈವದೊಟ್ಟಿಗೆ...ದೇವರೊಟ್ಟಿಗೆ ಕೋಪಮಾಡಿಕೊಂಡು ಹೋಗುವರು ಇದ್ದಾರೆ. ಈ ಸಂಭಂದಕ್ಕೆ ನನ್ನ ಬಳಿಉತ್ತರ ವಿಲ್ಲ.. ಅತಿ ಆಪ್ಯಾಯಮಯ ಸಂಭಂದ ಭಕ್ತರದು ತಮ್ಮ ಇಷ್ಟದೈವದೊಂದಿಗೆ.

ಪರಿಸರದಲ್ಲಿ ಎಲ್ಲವೂ ಶ್ರೇಷ್ಟವೇ, ನಿಕೃಷ್ಟ ಯಾವುದೂ ಇಲ್ಲ...ಕನಿಷ್ಟ ಯಾವುದೂ ಅಲ್ಲ....ಸೃಷ್ಟಿಯಲ್ಲಿ ಉನ್ನತ, ನೀಚ ಎಂಬ ವರ್ಗೀಕರಣವಿಲ್ಲ....ಅಲ್ಲಿ ಕೇವಲ ವಿವಿದತೆಗೆ ಆದ್ಯತೆ....ಈ ವಿವಿಧತೆಯ ಸಮತೋಲನದಲ್ಲಿ ಸಜೀವ, ನಿರ್ಜೀವಿಗಳೆರಡೂ ಸಮ ಪಾಲುದಾರರು....ಎಂಬ ಅವರ ವಾದ.... ಬದುಕಿಗೆ ಪೂರಕವಾಗುವ ಎಲ್ಲವೂ ಪೂಜ್ಯರೆ....ಹಾವಾಗಬಹುದು. ಹತ್ತಿಗಿಡವಾಗಲಿ, ಇಲಿಯಾಗಿರಲಿ, ಆಲದಮರವಾಗಲಿ, ಆನೆಯೇ ಅಗಿರಲಿ...ಸಿಂಹ, ಎಮ್ಮೆ, ದನ, ನಂದಿ, ಕರಡಿ, ಕೋಡಗ.....ಎಲ್ಲವೂ ನಮ್ಮ ಬದುಕನ್ನು ಆವರಿಸುವ ಅವಿಭಾಜ್ಯ ಘಟಕಗಳು. ಮಾನವ ಪ್ರಭೇದ ಇತರ ಜೀವಿಗಳಿಲ್ಲದೆ ಬದುಕಲಾರ. ನಮ್ಮ ಅವಲಂಬನೆ ನಮ್ಮ ಅಸ್ತಿತ್ವ ಎರಡೂ ಎಲ್ಲಾ ಸಕಲಜೀವಿಗಳಿಂದಲೇ ಎಲ್ಲಾ ಜೀವಿಗಳ ಬದುಕು ನಿರ್ಧರಿಸಲ್ಪುಡುತ್ತದೆ. ಸಮಸ್ತ ಜೀವರಾಶಿಗಳಿಗೂ ತಮ್ಮದೇ ಪಾತ್ರವಿದೆ, ಈ ಪ್ರಕೃತಿಯಲ್ಲಿ ಪಾಲ್ಗೊಳ್ಳಲು ಮತ್ತು ತನ್ನ ನಿಗಧಿತ ಕಾರ್ಯವನ್ನು ಅರಿತೂ ಅಥವಾ ಅರಿಯದೇ ನಿಭಾಯಿಸಿಕೊಂಡು ಹೋಗುತ್ತಿವೆ ಜೀವಿಗಳು. ಆದರೆ ಇಂದು ನಮ್ಮ ದುರಾಸೆಯಿಂದ ಎಲ್ಲರ ಸಹಜ ಇರುವಿಕೆಯನ್ನೇ ಅರಿಯದೇ ನಾವೇ ಅತ್ಯಂತ ಪ್ರಭಲರು ಎಂದುಕೊಂಡಿರುವುದು ವಿಪರ್ಯಾಸ. ಇಲ್ಲಿ ಯಾರೂ ಪರಿಪೂರ್ಣ ಸ್ವತಂತ್ರರಲ್ಲ. ಯಾವುದೂ ಪರಾವಲಂಬಿಯಲ್ಲ...ಯಾರೂ ಅವಲಂಬಿತ ಗುಲಾಮರಲ್ಲ....ಪ್ರಕೃತಿನಿಯಮ ಪಾಲಕರು ಅಷ್ಟೇ....

ಯಾವುದೇ ಒಂದು ಜೀವಿ, ಅಥವಾ ವಸ್ತು ಅಥವ ಅಂಶ ಪರಿಪೂರ್ಣವಾಗಲಾರದು ಪರಿಸರ ಕ್ರಿಯಾಶೀಲತೆಗೆ....ಎಲ್ಲದರದ್ದೂ ತಮ್ಮತಮ್ಮದೇ ಅಸ್ತಿತ್ವದ ಹೊರತು ವಿರೋದಾಭಾಸ ಇಲ್ಲ..ಎಲ್ಲವೂ ಒಂದನ್ನೊಂದು ಅವಲಂಬಿಸಿವೆ ಈ ಪರಿಸರದ ಅಸಂಖ್ಯ ಅಂಶಗಳ ಒಟ್ಟುಮೊತ್ತದ ಪರಿಣಾಮ ಈ ಪರಿಸರವ್ಯವಸ್ಥೆ. ಎಲ್ಲವೂ ನಮ್ಮ ಕಣ್ಣಿಗೆ ಕಾಣಿಸದಿದ್ದರೂ , ಗ್ರಹದ ಯಾವುದೇ ಮೂಲೆಯಲ್ಲಿದ್ದರೂ....ಅದು ನಮ್ಮ ಮೇಲೆ ಪರಿಣಾಮವನ್ನು ಬೀರುತ್ತವೆ. ಅವುಗಳಿಲ್ಲದೇ ನಾವು ಬದುಕಲಾರೆವು ಎನ್ನುವ ವಾಸ್ತವ ಅರಿವಿನ ನಮ್ರತೆ ಶರಣಾಗತಿ....ಇದು...ಮೂಲ ತತ್ವ...ಪರಮ ಸತ್ಯ...

ಇಂದಿನ ಜನಗಳ ಬಹುದೈವ ಪೂಜಾ ಪದ್ದತಿ ಕೆಲವರಿಗೆ ವಿಚಿತ್ರ ಅಂತ ಕಂಡರೂ...ಅದರಲ್ಲಿ, ಅವರ ಅರಿವಿಲ್ಲದೇ ಪರಿಸರಕ್ಕೆ ಭಂದಿಸಲ್ಪಟ್ಟಿದ್ದಾರೆ. ಹಾಗೂ ಅದನ್ನು ಒಪ್ಪಿ, ಗೌರವಿಸುವ ವಿನಮ್ರತೆ ಇರಬೇಕು ನಮಗೆ. ಇದೆ...ನಮ್ಮಲ್ಲಿ....ಇದರಲ್ಲಿ ಕೀಳರಿಮೆ ಬೇಡ....ಎಲ್ಲರಲ್ಲೂ, ಎಲ್ಲದರಲ್ಲೂ ದೈವಶಕ್ತಿ ಕಾಣಬಲ್ಲ ಅಥವಾ ತಮ್ಮ ಸ್ವಾರ್ಥಕ್ಕಾದರೂ ನಂಬಬಲ್ಲ ಎಲ್ಲವನ್ನು ಮೀರಿದ ಇತಿಮಿತಿಯ ಅರಿವಿನ ಭಕ್ತರು...ನನಗೇನು...ನಗೆಪಾಟಲು ಅನಿಸುವುದಿಲ್ಲ....ಬೇರೊಂದು ದೈವವನ್ನು ನಂಬುತ್ತಾರೆ. ಅಂದರೆ...ಮೂಲದೇವರ ತಮ್ಮದೈವದ ಬಗ್ಗೆ ತಾತ್ಸಾರವಲ್ಲ. ಒಂದನ್ನು ಪೂಜಿಸುವದು ಅಂದರೆ ಇನ್ನೊಂದನ್ನು ತಿರಸ್ಕರಿಸುವುದು ಎಂದಲ್ಲ. ಪ್ರಪಂಚದ ಪರಿಸರದ ಸಕಲ ಪರಮಾಣು, ಅಣು, ನಿರ್ಜೀವ ಸಜೀವಿಗಳೆಲ್ಲಾ ಪರಿಸರದ ಅಂಶ.....ದೇವರೆಂದು ನಂಬ ಬಲ್ಲ ಉದಾರ ಮನಸಿನ, ವಿಶಾಲಹೃದಯದ ಭಕ್ತರು...ದೇವಾಲಯ, ದರಗ, ವೃಂದಾವನ, ಚರ್ಚ್, ಸಮಾಧಿ....ಯಾವುದರಲ್ಲೂ ಭೇದವಿಲ್ಲ. ಅದು ವಿಶಿಷ್ಟವಾಗಿ ವಿಶೇಷ ಅನಿಸಿದರೆ ಅದನ್ನು ಒಪ್ಪುತ್ತಾರೆ. ಅಲ್ಲಿ ಹೋಗಿ ನೆಲಕ್ಕೆ ಹಣೆಮುಟ್ಟಿಸಿ ನಮಸ್ಕಾರ ಸಲ್ಲಿಸುತ್ತಾರೆ.... ಎಲ್ಲದರಲ್ಲೂ ಶಕ್ತಿಯ ಮೂಲವನ್ನು ಕಂಡುಕೊಳ್ಳುತ್ತಾರೆ. ಶಕ್ತಿ ಇರಬಹುದು.....ಅಥವಾ ಇಲ್ಲದೆ ಇರಬಹುದು...ಅವರ ಅರಿವೆಗೆ ಬರಬಹುದು ಅಥವಾ ಬಾರದೆ ಇರಬಹುದು...ಆದರೆ...ಅವರ ಮಟ್ಟಿಗೆ ಅವರ ಗೌರವ, ಒಪ್ಪಿಗೆ ಸಲ್ಲುತ್ತವೆ...ಮತ್ತು ಒಪ್ಪುತ್ತವೆ ಸದಾ....ಅದು ತಪ್ಪಾಗಿದ್ದರೆ ಅದು ಅವರ ತಪ್ಪಲ್ಲ. ಅದು ಅವರಿಗೊಂದು ವಿಷಯವೂ ಅಲ್ಲ....ಇದುವರೆಗೂ ನಾನು ಯಾರೂ ಸಹಾ ಶಿವ ನನ್ನು ಪೂಜಿಸಿದರೆ, ವಿಷ್ಣುಗೆ ಕೋಪ, ಅಥವಾ ಅಯ್ಯಪ್ಪನ ಬಳಿಹೋದರೆ ಹನುಮಂತನಿಗೆ ಕೋಪ ಅಥವಾ ರಾಮನಿಗೆ ಆಗುವುದಿಲ್ಲ...ಶಾಪ ಕೊಡುತ್ತಾರೆ ಎಂದು ಯಾರೂ ಹೇಳುವುದನ್ನು ನಾನು ಕೇಳಿಲ್ಲ...ಯಾರೂ ಹಾಗೆ ಹೆದರುವುದಿಲ್ಲ....ಆ ಕಾರಣ ದಿಂದಲೇ ನಮ್ಮ ದೇಶದಲ್ಲಿ ಕಂಡ, ಕಂಡಲ್ಲಿ ಪ್ರಾಣಿಗಳು, ಮರಗಿಡಗಳು, ಪಕ್ಷಿ, ಕಪ್ಪೆ, ಉರಗ, ಸಸ್ತನಿಗಳು ಎಲ್ಲರ ದೇವಸ್ಥಾನವನ್ನು ಒಂದಲ್ಲಾ ಒಂದು ರೀತಿಯಲ್ಲಿ ನಿಕಟವಾಗಿ ಬೆರೆತಿರುವುದನ್ನು ಕಾಣಬಹುದು. ನಿರ್ಜೀವ ಅಂಶಗಳನ್ನೂ ಗೌರವಿಸುವ ಅಥವಾ ಪೂಜಿಸುವ ಮಹನೀಯರು.... ಮತ್ತು ಯಾರು ನಿಮ್ಮನ್ನು ಅದನ್ನು ಪೂಜಿಸಬೇಡ ಎಂದು ಹೆದರಿಸುವುದಾಗಲಿ, ಆಮಿಷ ಒಡ್ಡುವುದಾಗಲಿ, ಹೋಲಿಕೆಯಾಗಲಿ....ಇಲ್ಲ..ಆದುದರಿಂದಲೇ ನಮ್ಮ ಜನ ತಿರುಪತಿ, ಕಾಶಿ, ರಾಮೆಶ್ವರ, ಶಬರಿಮಲೈ, ಚಾಮುಂಡಿ, ಅನಂತ, ಕನ್ಯಾಕುಮಾರಿ, ವೈಷ್ಣವೊ ದೇವಿ ಇತ್ಯಾದಿ...ತೀರ್ಥಯಾತ್ರೆಯ ಜೊತೆಯಲ್ಲೇ ಪ್ರವಾಸಿತಾಣಗಳಿಗೂ ಹೋಗಿಬರುವಂತಹ ನಿಶ್ಕಲ್ಮಕ ಮನೋಸ್ಥಿತಿಯವರು. ಇತರಿಗೆ ವಿಚಿತ್ರವನಿಸಿ ನಗುವವರು ಹಂಗಿಸುವವರು ಇದ್ದಾರೆ....ಆದರೆ ಇವರಿಗೆ ಅದೆಲ್ಲಾ ನಗಣ್ಯ....ಪ್ರಪಂಚದಲ್ಲಿ ಕಂಡುಬರುವ ಎಲ್ಲಾ ದೇವಸ್ಥಾನಗಳ ದೈವವನ್ನೂ ಅದೇ ಭಕ್ತಿಯಲ್ಲಿ ಪೂಜಿಸಬಲ್ಲ ಮುಗ್ಧ ನಿಜಭಕ್ತರು...ಆದರೆ ಕೆಲವು ಲೌಕಿಕ ಕಾಮನೆಗಾಗಿ ದೇವರ ಮೇಲೆ ಮಾನಸಿಕವಾಗಿ ಅವಲಂಬಿಸಿ ಮನಸ್ಸನ್ನು ಒಪ್ಪಿಸಿ, ನಿಶ್ಚಿಂತರಾಗಿ ತಮ್ಮ ದೈನಂದಿಕ ಕರ್ಮಗಳಲ್ಲಿ ಮುಳುಗಿಬಿಡುತ್ತಾರೆ....ತಾವುನಂಬಿದ ಎಲ್ಲಾ ದೈವದನಂಬಿಕೆಗಳು ಇವರ ಆಶಾವಾದದ ಪ್ರತೀಕ....ಇವರ ಬಹುಮುಖ ದೈವಗಳ ನಂಬಿಕೆಯ ಮೂಲ.....ಆಶಾವಾದಿಗಳು ಅಷ್ಟೆ...ದುರಾಸೆಯ ದುರುಳರಲ್ಲ....ಎಲ್ಲಾ ದೇವರುಗಳೊಟ್ಟಿಗೆ ಇವರ ಸಂಭಂದ ಅಚಲ....ಹಾಗಾಗಿ ಯಾರೂ ಸಹಾ ತಾನು ಒಬ್ಬ ದೇವರನ್ನು ಮಾತ್ರ ಪೂಜಿಸುತ್ತೇನೆ ಎಂದು ಹೇಳುವುದಿಲ್ಲ. ಇಷ್ಟ ದೇವತೆ, ಮನೆದೇವರು, ಗ್ರಾಮ ದೇವತೆ, ಕುಲದೇವತೆ...ಎಲ್ಲವೂ ಸಮಾನ ಭಕ್ತಿಗೆ ಪಾತ್ರರಾಗುತ್ತಾರೆ ಅವರಿಗೆ. ಆತ್ಮ, ಪರಮಾತ್ಮ ಎಂಬ ಜಿಜ್ಞಾಸೆಯಾಗಲಿ, ದ್ವಂದ್ವವಾಗಲಿ ಇವರಲ್ಲಿಲ್ಲ..ದೇವರೊಟ್ಟಿಗೆ ಶ್ರೀಮಂತರಂತೆ ವ್ಯವಹಾರ ಮಾಡುವುದಿಲ್ಲ. ಪರಿಸರದ ಅಗೋಚರ ಶಕ್ತಿಯೇ ಅವರ ನಂಬಿಕೆಗೆ ಮೂಲ.

ಈ ಮೇಲಿನ ಯಾವ ತರ್ಕವೂ, ತಾತ್ವಿಕವಾಗಿ ಇಂದಿನ ಗೊಂದಲದ ಜಾತಿ ಛಿಧ್ರ ಸಮಾಜದಲ್ಲಿ ಸ್ಪಷ್ಟತೆಯನ್ನು ಕೊಟ್ಟು, ಸಮರ್ಥಿಸಿ ಸಾಧಿಸಿಕೊಳ್ಳಲಾರದ ಅಡಬಿಡಂಗಿ ಸ್ಥಿತಿಯಲ್ಲಿದ್ದೇವೆ.... ಸ್ಥೂಲವಾಗಿ ಅನುಭವಿಸಬಹುದು ಸೂಕ್ಷ್ಮ ಅವಲೋಕನ ದಿಂದ....ನನಗೂ ನಗು ಬರುತ್ತಿತ್ತು....ಒಮ್ಮೊಮ್ಮೆ ಮಕ್ಕಳಾಟಿಕೆ ಅನಿಸಿದ್ದುಂಟು. ಎಲ್ಲ ಭಕ್ತರನ್ನು ಕೇಳುತ್ತಿದ್ದೆ. ಆ ಪ್ರಶ್ನೆಯೇ ಅರಿವಾಗದಷ್ಟು ಗಾಢವಾದ ಮುಗ್ಧ ಆಶಾವಾದವೋ ಅಥವಾ ಅಚಲ ನಂಬಿಕೆಯೋ....ಕೀಳರಿಮೆ ಅಥವಾ ಪಾಪ ಪ್ರಜ್ಞೆ ಕಾಡುವುದಿಲ್ಲ ಅವರನ್ನು. ಆದರೆ ಅದರಂತೆ ಜೀವಿಸುತ್ತಾರೆ, ಬಹುಮಂದಿ ಈಗಲೂ....ಆಸ್ತಿಕನಲ್ಲ ಎಂಬ ಒಂದು ಅಹಂಕಾರ ಮಾತ್ರ ಇತ್ತು...ಆದರೆ ಸರಳತೆಯ ವಾಸ್ತವದ ಮುಂದೆ ಯಾವ ತತ್ವವು ನಿಲ್ಲುವುದಿಲ್ಲ. ನಾಸ್ತಿಕನಾಗಿಯೂ ಈ ಪರಿಸರ ವಿಧೇಯಿ ಆಸ್ತಿಕರಬಗ್ಗೆ ನನಗೆ ಪ್ರೀತಿ, ಗೌರವಗಳನ್ನು ಇಟ್ಟುಕೊಳ್ಳಬಹುದು.

ಎಲ್ಲರೂ ಒಬ್ಬರನ್ನೊಬ್ಬರು ಅಗೋಚರದಲ್ಲಿ ಅವಲಂಬಿತರು. ಸ್ವತಂತ್ರ ಎನ್ನುವ ಪದ ಮಾನವನ ಸೀಮಿತ ಬುದ್ಧಿಯನ್ನು ತೋರಿಸುತ್ತದೆ. ತಮ್ಮ ಸೀಮಿತ ಶಕ್ತಿಯ ಇತಿಮಿತಿಗೆ ದೇವರೆನ್ನುವ ಅಗೋಚರ ಅಮೂರ್ತವನ್ನು ಸೃಷ್ಟಿಸಿ, ಅದರಿಂದಲೇ ಸಂಪೂರ್ಣ ಸ್ವಾಮ್ಯದ ಗುತ್ತಿಗೆ ಪಡೆದು ಸಂಪೂರ್ಣ ಪರಿಸರ ಸಂತುಲನ ಶಕ್ತಿಯನ್ನೇ ಪಣಕ್ಕಿಟ್ಟು ಸ್ವಾರ್ಥ ತೀರಿಸಿಕೊಳ್ಳುತ್ತಿರುವುದು....ವಿಪರ್ಯಾಸ. ಯಾವ ಶಕ್ತಿಗೆ ಬಾಗಬೇಕಿತ್ತೋ...ಅದೇ ಶಕ್ತಿಯನ್ನೇ ಅದರ ಮೂಲಕವೇ ಶೋಷಿಸುತ್ತಿದ್ದೇವೆ ವಿವಿಧ ಹಂತಗಳಲ್ಲಿ. ಆ ನೈಸರ್ಗಿಕ ಪರಿಸರ ಪವಿತ್ರ ಮಂದಿರವನ್ನು ವಿರೂಪಗೊಳಿಸಿದ್ದೇವೆ....ಆದರೆ ಪರಿಸರವನ್ನು, ಜೀವವ್ಯವಸ್ಥೆಯನ್ನು ಸಂಪೂರ್ಣ ನಾಶಮಾಡುವ ಆತ್ಮಹತ್ಯ ಸಾಮರ್ಥ್ಯ ಇರಬಹುದು.ಆದರೆ ಸೃಷ್ಟಿಯ ಸಮತೋಲನವನ್ನು ನಿಯಂತ್ರಿಸುವ ಶಕ್ತಿನಮಗಿಲ್ಲ.......ನಾವೇ ನಾಶಹೊಂದಿ ಹೊಸದೊಂದು ಪರಿಸರ ಸೃಷ್ಟಿಯಾಗಬಹುದು ಅಷ್ಟೇ...ಇಲ್ಲಿ ಯಾರೂ, ಎಂದಿಗೂ ಅನಿವಾರ್ಯವಲ್ಲ....ಈ ಕಾಲ ಮತ್ತು ಸ್ಪೇಸ್ ಗಳಲ್ಲಿ....ಆಗಲೂ ಅದೇ ಅಗೋಚರ ಶಕ್ತಿ ತನ್ನ ಇರುವಿಕೆಯನ್ನು ಆಳ್ವಿಕೆಯನ್ನೂ ಮುಂದುವರಿಸುತ್ತದೆ. ಕಾಲ ಸರಿಯುತ್ತದೆ...ಜೀವಮಂಡಲವೂ ಬದಲಾಗುತ್ತದೆ.
.
ಆ ಬದುಕಿನ ಈ ಪರಿಕಲ್ಪನೆಯ, ಆದ್ಯಾತ್ಮದಲ್ಲೇ ಬದುಕಿದ್ದರೆ ಎಲ್ಲರೂ !!! ಅನುಸರಿಸಿದ್ದರೆ....ಪ್ರಾಯಶಃ ಇಂದಿನ ಪ್ರಕ್ಷುಬ್ಧ ಅಪಾಯದ ಸ್ಥಿತಿ ಕಾಣುತ್ತಿರಲಿಲ್ಲ. ಯಾವಾಗ ನಮಗೆ ನಾವೇ ಶ್ರೇಷ್ಟ ರೆಂಬ ಮಂಕು ಬಡಿಯಿತೋ...ಅಂದಿನಿಂದಲೇ ಅರಂಭವಾಯಿತು...ನೈಜ, ಜೈವಿಕ ಸಹಜ ನಿಸರ್ಗದ ಬುನಾದಿಮೇಲೆದ್ದ ನಮ್ಮ ಶಿಥಿಲತೆಯ ಬದುಕು. ಕೊರಗಜ್ಜನಂತಹ ಸ್ಥಳೀಯ ದೈವಗಳು ನಂಬಿಕೆ ಮತ್ತು ಶಕ್ತಿಯರೂಪದಲ್ಲಿ ಬೆಳೆಯುತ್ತವೆ...ಪರಿಸರ ಇರುವವರೆಗೂ....ಇದನ್ನು ಕೇವಲ ಮೂಢನಂಬಿಕೆ ಎಂದಾಗಲಿ, ಅಜ್ಞಾನಿಗಳೆಂದಾಗಲಿ ಹೆಸರಿಸಿ ವರ್ಗೀಕರಿಸಲಾಗುವುದಿಲ್ಲ.ಇದು ಅವರ ಮಾನಸಿಕ ಶಕ್ತಿ ಮತ್ತು ತೃಪ್ತಿಯ ಬದುಕಿನ ಪ್ರತಿರೂಪ.


Comments

Popular posts from this blog

ಕಾಗೆ....