ಯಶಸ್ವಿ.

ಯಶಸ್ಸಿಗೇಕೆ ಮೆಟ್ಟಿಲು ? ಎಸ್ಕಲೇಟರ್ ಗಳ ಕಾಲದಲ್ಲಿ
ಜಾರೋಬಂಡೆಯಲ್ಲಿ ಮೇಲಕ್ಕೂ ಜಾರಬಹುದು !
ಕೆಳಕ್ಕೂ ಏರಬಹುದು ! ಗುರುತ್ವಮೀರಿದ ಗುರು,
ಕಟ್ಟಬಹುದು ಸಂತಸದ ಬದುಕು ಕಣ್ಣಿದ್ದು ಕುರುಡಾಗಿ,
ಸಾಗರದಡಿ ನಡಿಗೆಗೆ, ಭೂಮಿಯ ಋಣವೇಕೆ ಚಲನೆಗೆ,
ಸಂಭಂದ ಕಳಚಿದ ತೇಲುವಿಕೆಗೆ,
ಮೇಲ್ಮೈ ವಿಸ್ತಾರ ಅನಿವಾರ್ಯವಲ್ಲ.
ಜಲನಿಯಮ ಉಲ್ಲಂಘನೆಯಲ್ಲ
ಅನ್ವಯ..ತೇಲುಜೀವಿಗಳಿಗೆ ಮಾತ್ರ ಸಾಗರದಲ್ಲಿ.
ಲವಣ ಸಾಂದ್ರತೆ, ತೂಕ ಕಳೆದುಹೋದ ಪದಗಳು
ಗುರುತ್ವ ನಿಸರ್ಗದ ಅಪ್ಪನ ಸ್ವತ್ತಲ್ಲ ಸ್ವಾಮಿ.
ಈ ಕಾಲದಲ್ಲಿ. ನಮ್ಮ ಯುಕ್ತಿಯ ಶಕ್ತಿ.
ಹಗುರಾದ ವಿಮಾನಕೇ ಇಲ್ಲ ತೂಕದ ಹಂಗು,
ಹಡಗಿಗೇಕೆ, ಪಾಪ, ಇನ್ನು ಭಾರದ ಹೊರೆ?
ಹಕ್ಕಿಗಳ ಹಾರಾಟ ಭಾಗಶಹ ರದ್ದು
ಹಿಮಗಿರಿ ಕರಗಿ ನದಿಯಾಗಿ ಹರಿವಾಗ
ಅಣೆಕಟ್ಟಿಗಳಿಗೇಕೆ ಪಕ್ಷಪಾತ, ನದಿಯ ಹರಿವಿಗೆ
ಉಕ್ಕಲಿ ಪ್ರವಾಹ, ಕೊಚ್ಚಿಹೋಗಲಿ ಹಳೆಯ ಕೊಳೆ
ಮುಳುಗಿ ಹೋಗಲಿ ಆ ನಿಶ್ಚಲ ಕೊಳೆತ ಹೊಳೆ,
ನಲುಗದ ನವ ವಿನ್ಯಾಸದ ಆವಾಸ ನಿಶ್ಚಲ
ಪ್ರಕೃತಿ ವಿಕೋಪ ನಿರೋಧಕ ಸಂಶೋಧನೆಯಲಿ
ಸ್ಥಿರ ನಿಲ್ಲುವ ಯಶಸ್ವಿ, ಕಂಡಿರದ ತಪಸ್ವಿ
ಹಿಮಕ್ರೀಡೆಗಳ ಆಯೋಜನೆ ಮರುಭೂಮಿಯಲಿ
ಕಡಲ ಒಡಲ ಕೊರೆತದಲ್ಲಿ ತೈಲ ಗಣಿ ಉದ್ಘಾಟನೆ
ಕಾಡನು ಕರಗಿಸಿ, ಮೃಗಗಳ ಬೆದರಿಸಿ, ಗಿಡಮರಗಳ ಸವರಿ
ಸಿಂಗರಿಸಿ, ನವ, ನವೀನ ಬಡಾವಣೆಯ ಶೃಂಗಾರ,
ಇದು ನಮ್ಮ ಚಮತ್ಕಾರ, ಕೇಳದಿರಲಿ ಚೀತ್ಕಾರ
ಹಾಕೊಂದು ಧಿಕ್ಕಾರ, ಮಾನವತೆಯ ಮಮಕಾರ
ಸರ್ವರಕ್ಷಕ, ಆ ನಿರಾಕಾರನಿಗೊಂದು ಇರಲಿ ನಿನ್ನ ಜೈಕಾರ,
ಸಾಕು.
ನಿನ್ನ ಬದುಕು, ನಿನ್ನದೇ ದೇವರು ನಿನಗ್ಯಾಕೆ ಬೇಕು
ಇತರರ ಉಸಾಬರಿ, ಬದುಕು ನೀ ಮಾತ್ರ ಬರೋಬರಿ.
Surya Manju

Comments

Popular posts from this blog

ಕಾಗೆ....