ಕಾಗೆ....









ಕಾಗೆ 

ನಾನು ಶಾಲೆಗೆ ಎಲ್ಲರಗಿಂತ ಮುಂಚೆ ಎಂಟು ವರೆಗೆ ತಲುಪಿದೆ. ಯಾರು ಬಂದಿರಲಿಲ್ಲ. ಬರುವುದು ಇಲ್ಲ. ಕಾರಣ ಅಕ್ಟೋಬರ್ ರಜೆ, ಇನ್ನು ನಮ್ಮ ಆಫೀಸ್ ನ ಸಹೋದ್ಯೋಗಿಗಳು ಬರುವುದಕ್ಕೆ ಕನಿಷ್ಠ ಇನ್ನೊಂದುಗಂಟೆಯಾದರೂ ಬೇಕು. ಮೇಷ್ಟ್ರುಗಳು ಹಾಗು ಹುಡುಗರು ಬರುವ ಪ್ರಶ್ನೆ ಇಲ್ಲ. ಹಿಂದಿನ ರಾತ್ರಿ ಮಳೆಜೋರಾಗಿ ಬಂದುದರಿಂದ ಚಾವಣಿಯಿಂದ ಇನ್ನು ನೀರು ಹನಿ ಹನಿ ಯಾಗಿ ತೊಟ್ಟಿಕ್ಕುತ್ತಿತ್ತು. ಪಕ್ಕದ ಹಾಲ್ ನಲ್ಲಿ ಮರಿಯಪ್ಪನವರು ತಮ್ಮ ಕಾಲೇಜ್ ಹುಡುಗರಿಗೆ ಕಾಮರ್ಸ್ ಟ್ಯುಶನ್ ಮಾಡುತ್ತಿದ್ದರು. ರೈನ್ ಕೊಟ್ ಬಿಚ್ಚಿ ಕುರ್ಚಿಗೆ ನೇತುಹಾಕಿ ಕುಳಿತು, ನನ್ನ ಪ್ರತಿನಿತ್ಯದ ಅಭ್ಯಾಸದಂತೆ ಸಾಮಾನ್ಯವಾಗಿ ಕಳಿಸುವ ಸ್ನೇಹಿತರಿಗೆಲ್ಲಾಮೆಸೇಜ್ ಕಳಿಸಿ, ಬೇರೇನೂ ಕೆಲಸ ತೋಚದೆ, ಟ್ಯೂಬ್ ಲೈಟ್ ಆನ್ ಮಾಡಿ, ಹತ್ತನೆಯ ತರಗತಿಯ ಜೀವವಿಜ್ಞಾನದ ಪುಸ್ತಕ ತಿರುವಿಹಾಕಲು ಶುರು ಮಾಡಿದೆ. ಯಾವುದು ಹೊಸ ವಿಷಯ ಇಲ್ಲ, ಕ್ಲಾಸ್ ಗೆ ತಯಾರಿ ಮಾಡಿಕೊಳ್ಳುವಷ್ಟು ಅಗತ್ಯವೂ ಇರಲಿಲ್ಲ. ಏನುತೋಚದೆ ಸ್ಟಾಫ್ ರೆಜಿಸ್ಟರ್ ತೆಗೆದು ಸಹಿ ಹಾಕಿದೆ. ಹೊರಗಡೆ ಮೋಡ ಕವಿದ ವಾತಾವರಣ. ಇವೊತ್ತು ಸಹಾ ಮಳೆ ಬರಬಹುದುಎನಿಸಿತು. ಮೂರನೇ ಮಹಡಿಯಿಂದ ಮಬ್ಬಾದ ಎದುರಿಗಿನ ಆಕಾಶ ನೋಡುವುದು ಒಂದು ಅನುಭವ.
ಇದ್ದಕ್ಕಿದ್ದ ಹಾಗೆ ತೆರೆದ ಬಾಗಿಲಿನಿಂದ ಕಾಗೆ ಹಾರಿ ಬಂದು ನನ್ನ ತಲೆಯ ಮೇಲಿದ್ದ ಕಿಟಕಿಯ ಮೇಲೆ ಕುಳಿತು ಒಂದು ಪಕ್ಕದಿಂದಇನ್ನೊಂದು ಪಕ್ಕಕ್ಕೆ ಹದರಿ ಹೊರ ಹೋಗಲು ಪ್ರಯತ್ನಿಸುತ್ತಿತ್ತು. ಪ್ರಾಯಶಃ ಹೊರಗಿನಿಂದ ಬಂದ ನನ್ನ ಅಪರೂಪದ ಅಥಿತಿಗೆಅದೊಂದು ಹೊರಹೋಗುವ ಕಿಂಡಿಯಂತೆ ಕಂಡಿರಬೇಕು. ಹಾಗಾಗಿ ಗಾಜಿನಿಂದ ಪ್ರತ್ಯೇಕಿಸಲ್ಪಟ್ಟ ಕಿಟಕಿಯ ಹೊರ ಹೋಗಲು ಶತಪ್ರಯತ್ನ ಪಡುತ್ತಿತ್ತು. ಪ್ರಯತ್ನ ಎನ್ನುವುದಕ್ಕಿಂತ ವಿಲಿ ವಿಲಿ ಒದ್ದಾಡುತ್ತಿತ್ತು. ಹೆದರಿಕೆ ಯಿಂದ ಹಾಕಿದ ಯೂರಿಕ್ ಆಮ್ಲ ಪಿಕ್ಕೆ ನನ್ನಮೇಜಿನ ಮೇಲೆಲ್ಲಾ ಬೀಳುತ್ತಿತು. ನನಗೆ ಹೆದರಿಕೆ, ಆಶ್ಚರ್ಯ ಒಟ್ಟಿಗೆ ಆಯಿತು. ಒಂದು ಕ್ಷಣ ಏನು ತೋಚಲಿಲ್ಲ. ಹೆದರಿಕೆಯೇ ಜಾಸ್ತಿಆಗಿ, ಪರಾವರ್ತಿತ ಪ್ರತಿಕ್ರಿಯೆಯಂತೆ ತಕ್ಷಣ ಮೇಲೆದ್ದು ಹೊರಗೆ ಬಂದು ಬಾಗಿಲ ಬಳಿ ನಿಂತು ಕರೆಯದೆ ಬಂದ ಅಥಿತಿಯನ್ನು ಹೊರಹಾಕುವ ಯೋಚನೆ ಮಾಡಿದೆ. ಕಾಗೆಯ ವ್ಯರ್ಥ ಪ್ರಯತ್ನದಲ್ಲಿ ಮೆಜೆಲ್ಲ ಗಲೀಜಾಗಿತ್ತು. ಏನೋ ಹೊಳೆದವನಂತೆ ಒಳಗೆ ಬಾಗಿಲಪಕ್ಕದಲ್ಲೇ ಇದ್ದ ಸ್ವಿಚ್ ಗೆ ಹೊರಗಿಂದಲೇ ಕೈಹಾಕಿ, ಫ್ಯಾನ್ ಆನ್ ಮಾಡಿದೆ. ಅದೊಂದು ದಾರಿ ಕಾಣದೆ ಬಂದ ಅಥಿತಿಯನ್ನುಹೊರಹಾಕುವ ಭಯಂಕರ ಯೋಚನೆ ಆಗಿತ್ತು. ಆದರೆ ಕಾಗೆ ನನ್ನ ಯೋಚನೆಯಂತೆ ಹೊರಗೆ ಬರಬೇಕಾದರೂ ಸಹಾ ತಿರುಗುವಫ್ಯಾನ್ ಅನ್ನು ಹಾದು ಬರಬೇಕೆಂದು ಹೊಳೆದಾಗ ನನಗೆ ದಿಕ್ಕು ತೋಚದಾಯಿತು. ಕಾರಣ, ನಿಜಕ್ಕೂ ಅದು ಹಾರಿಬಂದರೆ ತಿರುಗುವಫ್ಯಾನ್ಗೆ ಸಿಕ್ಕು ಹೆಣವಾಗುತ್ತಿತ್ತು. ತಕ್ಷಣ ದಿಕ್ಕು ತೋಚದೆ ಮೊದಲು ಸ್ವಿಚ್ ಆಫ್ ಮಾಡಿದೆ. ನನ್ನ ಎದೆ ಸಹಾ ಡವ ಡವಹೊಡೆದುಕೊಳ್ಳುತ್ತಿತ್ತು. ಬ್ಲೇಡ್ ಗಳು ಸಂಪೂರ್ಣ ನಿಶ್ಚಲ ಸ್ಥಿತಿಗೆ ಬರುವವರೆವಿಗೂ ನನ್ನ ಹೃದಯ ಬಡಿತ ಕಡಿಮೆಯಾಗಲಿಲ್ಲ. ಕೆಲವುಕ್ಷಣಗಳ ವರೆಗೂ ನನ್ನ ಅಥಿತಿಗೂ ನನ್ನನ್ನು ನೋಡಿ ಹೆದರಿಕೆಯಾಗಿತ್ತು ನನ್ನಂತೆ. ಕ್ಷಣಗಳು ಉರುಳಿದಂತೆ ನನ್ನ ಅಥಿತಿಗೂ ನಾನುಅಪಾಯಕಾರಿ ಅಲ್ಲ ಅಂತ ಗೊತ್ತಾಯ್ತೋ ಏನೋ ತಣ್ಣಗಾಗಿ ಒಂದು ಕಡೆ ಕುಳಿತು ಕಡೆ ಕಡೆ ಪಿಳಿ ಪಿಳಿ ಕಣ್ಣು ಬಿಡುತ್ತಿತ್ತು.
ನನಗೂ ಏನು ಹೊಳೆಯಲಿಲ್ಲ. ಸುಮ್ಮನೆ ಗ್ರಿಲ್ ಹತ್ತಿರ ಬಂದು ಯಾರಾದರು ಬಂದ ಮೇಲೆ ಹೊರ ಹಾಕುವ ಉಪಾಯ ಮಾಡಲುನಿರ್ಧರಿಸಿದೆ. ಹೀಗೆ ಒಬ್ಬರಿಗೊಬ್ಬರು ಹೆದರಿ ಕೊಂಡು ಸ್ವಲ್ಪ ಕಾಲ ತಳ್ಳಿದೆವು. ಯಾರಿಗೋ ಉತ್ತರ ಕೊಡುತ್ತಾ ಮೊಬೈಲ್ ನೊಂದಿಗೆಮರಿಯಪ್ಪನವರು ತಮ್ಮ ಕ್ಲಾಸ್ ನಿಂದ ಹೊರ ಬಂದು ಮುಖ ನೋಡಿ ನಕ್ಕು ಫೋನ್ ನಲ್ಲಿ ಸಂಭಾಷಣೆ ಮುಗಿಸಿ ನನ್ನ ಬಳಿ ಬಂದುಅವರ ಸೆಮಿನಾರ್ ಬಗ್ಗೆ, ದೆಹಲಿಗೆ ಹೋಗುವ ಬಗ್ಗೆ ಉತ್ಸುಕರಾಗಿ ಮಾತಾಡಿದರು. ಅವರು ಆಗ ತಾನೇ ಬರೆದು ಮುಗಿಸಿದ ಪ್ರಭಂದಕ್ಕೆ ಡಾಕ್ಟ್ರೇಟ್ ಸಿಗುವ ಸಂಭವದ ಬಗ್ಗೆ ವಿವರಿಸಿ ಹೋಗುವ ಮೊದಲು ಮತ್ತೆ ಕಾಫಿಗೆ ಬರುವುದಾಗಿ ಹೇಳಿ ಕ್ಲಾಸಿಗೆ ಹೊರಟವರು ಮತ್ತೆಅನುಮಾನವಾಗಿ ಯಾರಿಗಾದರು ಕಾಯುತ್ತಿದ್ದಿರ ಎಂದು ವಿಚಾರಿಸಿದಾಗ ನನ್ನ ಅಥಿತಿಯ ಬಗ್ಗೆ, ಒಳಗೆ ಬಂದ ಸಂಪೂರ್ಣಸನ್ನಿವೇಶವನ್ನು ವಿವರಿಸಿ, ಸ್ವಲ್ಪ ಸಮಯದ ನಂತರ ತಾನೇ ತಾನಾಗಿ ಅದು ಹೋಗುತ್ತದೆ ಎಂದು ಹೇಳುವಷ್ಟರಲ್ಲಿ,, ಕಾಗೆ ಶಬ್ದಕೇಳಿದ ತಕ್ಷಣ "ಹಾಗೆ ಕಾಗೆ ಒಳಗೆ ಬರುವುದು ಒಳ್ಳೆಯ ಶಕುನ ವಲ್ಲ" ಎಂದು ಕಳಕಳಿಯಿಂದ ಚಿಂತಾಕ್ರಾಂತರಾಗಿ, ತಕ್ಷಣ ನಮ್ಮಶಾಲೆಯ ಕಾವಲುಗಾರನನ್ನು ಕರೆದು ಕಾಗೆಯನ್ನು ಹೊರಹಾಕುವಂತೆ ಹೇಳಿದರು.ಕಾವಲುಗಾರ ಒಂದು ಕೋಲನ್ನು ಹಿಡಿದು ಮೇಲೆಬಂದು ಎಲ್ಲಿ ಸಾರ್ ಅಂತ ಕೇಳಿ ಆಫೀಸ್ ನೊಳಗೆ ಹೋದ. ನಾನು ಹಿಂಬಾಲಿಸಲಿಲ್ಲ. ನನ್ನೆದುರಿಗೆ ಅನೇಕ ವರ್ಷ ಸೆರೆಮನೆಯಲ್ಲೇಇದ್ದು, ಅನಿರೀಕ್ಷಿತತಪ್ಪಿಸಿಕೊಂಡ ಯುದ್ದ ಕೈದಿಯಂತೆ ಹೊರಗೆ ಹೋಯಿತು.. ಹೆದರಿಕೆಯಲ್ಲಿ, ನನ್ನ ಅತಿಥಿ ಮಾಡಿದ ಗಲೀಜನ್ನೆಲ್ಲಾವಾಚ್ ಮನ್, ನಾನು ಆಫೀಸ್ ನೊಳಗೆ ಹೋಗುವ ಮೊದಲು ಬಳೆದು, ತೊಳೆದು ಹೋಗುವಾಗ "ಏನಾದರು ಶಾಂತಿ ಮಾಡ್ಸಿ ಸಾರ್"ಅಂತ ಹೇಳಿ ಹೋದ.

ತಮ್ಮ ಕ್ಲಾಸ್ ಮುಗಿಸಿಕೊಂಡು ಮರಿಯಪ್ಪನವರು ಪ್ರತಿನಿತ್ಯದಂತೆ ಕಾಫಿಗೆ ಕಾಯದೆ ಹೊರಟು ಹೋದರು.ನನ್ನ ಕುರ್ಚಿಯಲ್ಲಿಒಂಟಿಯಾಗಿ ಕುಳಿತುಕೊಂಡೆ. ಮರಿಯಪ್ಪನವರು ಹೇಳಿದ ಮಾತು 'ಕಾಗೆ ಒಳಗೆ ಬರುವುದು ಒಳ್ಳೆಯ ಶಕುನವಲ್ಲ' ಕಾಡಲಾರಂಭಿಸಿತು.
ಹೌದು ಬಹಳಷ್ಟು ಜನ ಕಾಗೆಯಂದರೆ ಹೆದರುತ್ತಾರೆ. ಕಾರಣ ಕೆಲವರ ಪ್ರಕಾರ ಅದು ಮನೆಯೊಳಗೆ ಬರುವುದು ಯಾರದೋ ನಮ್ಮ ಆತ್ಮೀಯರ ಸಾವಿನ ಸಂಕೇತ ಎಂದು. ಆದರೆ ಶನಿದೇವನ ವಾಹನ ವಾದ ಕಾಗೆಗೆ ಅಪವಾದ ಯಾಕೆ ? ಗೊತ್ತಿಲ್ಲ. ಇನ್ನೂ ಕೆಲವರು ಶನಿ ಯಲ್ಲರಿಗೂ ಎಲ್ಲ ಸಂದರ್ಭದಲ್ಲೂ ಕೆಟ್ಟದ್ದನ್ನು ಉಂಟುಮಾಡುವುದಿಲ್ಲ ಎನ್ನುತ್ತಾರೆ. ನನಗೆ ನಂಬಿಕೆ ಇಲ್ಲದಿದ್ದರೂ ಸಹಾ ಈಗ ತಾನೇ ತಮ್ಮ ಅಭಿಪ್ರಾಯವನ್ನು ಕೊಟ್ಟು ಹೋದ ಮರಿಯಪ್ಪ ಹಾಗೂ ವಾಚ್ಮನ್ ರವರ ಅಭಿವ್ಯಕ್ತಿ ಎಲ್ಲೂ ನನ್ನನ್ನು ವಿಚಲಿತನನ್ನಾಗಿ ಮಾಡಿದ್ದು ನಿಜ. ಹೆದರಿಕೆ ಯಾಗದಿದ್ದರೂ ಒಂದುರೀತಿಯ ಚಡಪಡಿಕೆ. ಯಾರಾದರು ಇದ್ದರೆ ಸರಿಹೋಗುತ್ತಿತ್ತು. ಆದರೆ ಹೊತ್ತಿನಲ್ಲಿ ಸಧ್ಯಕ್ಕೆ ಬರುವವರು ಯಾರು ಇಲ್ಲ. ಒಂದು ಕ್ಷಣ ಹೊರಗೆ ಹೋಗಿ ಕಾಫಿ ಕುಡಿದು ಬಂದರೆ ಒಳ್ಳೆಯದೇನೋ ಅನಿಸಿತು. ಆದರೆ ನನ್ನ ಮನಸ್ಸು ಒಪ್ಪಲಿಲ್ಲ. ಕೆಟ್ಟ ಕಲ್ಪನೆಗಳನ್ನೇ ಮಾಡಿದೆ. ಏನಾಗಬಹುದು ಶನಿಯ ಪ್ರಭಾವದಿಂದ? ಅತಿ ಹೆಚ್ಚಂದರೆ ಸಾಯ ಬಹುದು. ಅಡ್ಡಿ ಇಲ್ಲ. ಸಾವಿನ ಹೆದರಿಕೆಯಿಂದ ಪೂರ್ಣ ಹೊರಬರದಿದ್ದರೂ ನನ್ನ ಬದುಕಿನ ರೀತಿಯನ್ನು ನೆನಪಿಸಿಕೊಂಡಾಗ ಇಷ್ಟು ವರ್ಷ ರೀತಿ ಬದುಕಿರುವುದೇ ಒಂದು ದೊಡ್ಡ ಅದೃಷ್ಟ ಅಂದುಕೊಂಡೆ. ಕೆಲವೇ ತಿಂಗಳುಗಳಹಿಂದೆಯಷ್ಟೇ ಹೃದಯಾಘಾತದಿಂದ ಸಾವನ್ನು ಯಾಮಾರಿಸಿಬಂದಿದ್ದೆ. ಸಾವು ಯಾರಿಗೂ ಬೇಡ ನಿಜ. ಕಷ್ಟವಾದರೂ ಪರವಾಗಿಲ್ಲ ಜೀವಂತ ವಾಗಿದ್ದು ಹೊರಗಿನ ಪ್ರಚೋದನೆಗಳಿಗೆ ಹಾಗೂ ಅಂತರಿಕ ಸಹಜ ಪ್ರವೃತ್ತಿಗಳಿಗೆ ಪ್ರತಿಕ್ರಿಯಿಸುವುದೇ ಜೀವಿಗಳ ಬದುಕಿನ ಸೌಂದರ್ಯ!!
ಇನ್ನೆನಾಗಬಹುದು? ಕುಂಟನೋ, ಕುರುಡನೋ ಆಗುವ ಆಕಸ್ಮಿಕಗಳೂ ಸಂಭವಿಸಬಹುದಾದ ಯೋಚನೆ ನನ್ನ ಮನಸ್ಸಿನಲ್ಲೇ ಹಾದು ಹೋಗಿ ಒಂದು ಕ್ಷಣ ಕಂಗಾಲಾದೆ. ಕೆಟ್ಟದು ಅನ್ನುವುದಕ್ಕೆ ಮತ್ತು ಆಗುವುದಕ್ಕೆ ಸಾವಿರ ಉದಾಹರಣೆಗಳಿವೆ. ಆದರೆ ಏನಾದರು ಅದನ್ನು ಎದುರಿಸಲೇ ಬೇಕು. ಕಾಗೆ ನನಗೆ ಸಂಭವಿಸಬಹುದಾದ ಕುಂಟುತನವನ್ನು ತಳ್ಳಿಹಾಕಬಹುದೇ? ಅಥವಾ ನನ್ನ ಸುಖ ಸಂತೋಷ, ಆಯುಷ್ಯವನ್ನು ಮೊಟಕುಗೊಳಿಸಬಹುದೇ? ನನ್ನ ಹುಚ್ಚು ಆಲೋಚನೆಗೆ ನನಗೆ ನಗುಉಂಟು ಮಾಡಿತು. ಹಾಗಾದರೆ ನನ್ನ ಮನಸ್ಸಿನ ವಿಚಿತ್ರ ಸ್ಥಿತಿಗೆ ಕಾರಣವೇನು? ಜೀವನದ ಅನೀರಿಕ್ಷಿತಗಳಿಗೆ ತಯಾರಿಲ್ಲವೇ?. ವಾಸ್ತವ ಬದುಕಿನ ಬಗ್ಗೆ ಹೆದರಿಕೆಯೇ? ಇರುವ ಸಂತೋಷವನ್ನು ಎಲ್ಲಿ ಕಳೆದುಕೊಳ್ಳುವೆನೆಂಬ ಕಳವಳವೇ? ಹಾಗಾದರೆ ನಾನು ಶಾಶ್ವತವಾಗಿ ವರ್ತಮಾನ ಸ್ಥಿತಿಯಲ್ಲೇ ಇರಲು ಪರಿತಪಿಸುತ್ತಿದ್ದೆನೆಯೇ?
ಬಲವಂತವಾಗಿ ನನ್ನ ಮನಸ್ಸಿನ ಯೋಚನಾಲಹರಿಯನ್ನು ಬದಲಿಸಲು ಪ್ರಯತ್ನಿಸಿದೆ. ನೆನಪಿಗೆ ಬಂದದ್ದು, ಅಲ್ಲ ತಂದು ಕೊಂಡದ್ದು... ತಕ್ಷಣ ಡಿ.ಎಚ್. ಲಾರೆನ್ಸ್ ನ 'The Snake' ಕವನ. ನನಗರಿವಿಲ್ಲದೆ ನನಗೆ ಸಮಾಧಾನ ವಾಯಿತು. ಎಲ್ಲವು ಗೊತ್ತು ಆದರೆ ಹದರಿಕೆ ಒಂದು ಸಹಜ ಪ್ರವ್ರ್ರತ್ತಿ ನಡುವಳಿಕೆ. ಮನಸ್ಸು ಹಗುರವಾಯಿತು. ಕೆಲವೇ ವರ್ಷಗಳ ಹಿಂದೆ ನಡೆದ ಒಂದು ಘಟನೆ ನನ್ನ ನೆನಪಿಗೆ ಬಂತು...
1999 ರಲ್ಲಿ ನನ್ನ ಮೊದಲೆನೆಯ ತಮ್ಮ ಉತ್ತರಹಳ್ಳಿ ಬಳಿಇರುವ ಯಾದಾಳಂ ನಗರದಲ್ಲಿ ಮನೆ ಕಟ್ಟಿಸಿದ. ಅದು ನಿಜಕ್ಕೂ ನಗರದ ತೀರ ಹೊರವಲಯ ಎಂತಲೇ ಹೇಳಬೇಕು. ಕಾರಣ ಆಗಿನ್ನೂ ತಲೆಯೆತ್ತುತ್ತಿದ್ದ ಹೊಸ ಬಡಾವಣೆ ನಿವೇಶನ ಮಾಲೀಕರು ತಮ್ಮ ಕನಸಿನ ಮನೆಗಾಗಿ, ನೂರಾರು ಹಾವುಗಳನ್ನು ಕೊಲ್ಲಿಸಿ ತಮ್ಮ ಜಾಗವನ್ನು ಶುಚಿಯಾಗಿಸಿರುವದನ್ನುನಿಸ್ಸಹಾಯಕನಾಗಿ ನೋಡಿದ್ದೇನೆ.
ಗೃಹಪ್ರವೇಶದ ನಂತರ ನನ್ನ ತಮ್ಮನ ಕುಟುಂಬ ಅಲ್ಲೇ ಇರಲು ಆರಂಭಿಸಿದರು. ಹೊಸಮನೆಯಲ್ಲಿ ನಮ್ಮ ತಾಯಿಯವರು ಕೆಲವುಸಮಯದ ವರೆಗೆ ಇರಲು ಹೋಗಿದ್ದರು. ಕೆಲವು ವಾರಗಳನಂತರ ಇದ್ದಕ್ಕಿದ್ದ ಹಾಗೆ ಒಂದು ಕಾಗೆ ಗೃಹಪ್ರವೇಶ ವಾಗಿದ್ದಹೊಸಮನೆಯ ಮರು ಪ್ರವೇಶ ಮಾಡಿತು!! ಸ್ವಲ್ಪಸಮಯದ ಹಿಂದಷ್ಟೇ ಎಲ್ಲಾ ಹವನ ಹೋಮಗಳನ್ನು ವಿಧಿವತ್ತಾಗಿ ಮಾಡಿಸಿ, ಎಲ್ಲಾರೀತಿಯ ಶಾಂತಿಯನ್ನು ಮಾಡಿಸಿ, ಪೂಜೆ ಪುನಸ್ಕಾರಗಳನ್ನು ಪೂರೈಸಿ ದೇವರ ಸಂಪೂರ್ಣ ಆಶೀರ್ವಾದ ಪಡೆದು ಹೋಗಿದ್ದ ಮನೆಗೆಹೀಗೆ ಕಾಗೆ ನುಗ್ಗಬಹುದೇ? ಎಲ್ಲಿ ಲೋಪ ವಾಗಿರಬಹುದು ಎಂದು ಎಲ್ಲರೂ ತಲೆ ಕೆಡಸಿ ಕೊಂಡರು. ಯಾವುದೋ ಒಂದು ಭಯಂಕರಅನಾಹುತದ ಸೂಚನೆ ಎಂದು ಎಲ್ಲರೂ ಹೆದರಿಕೊಂಡಿದ್ದರು. ಮಾಡೇ ಇರದ ದೋಷ ಪರಿಹಾರಕ್ಕೆಂದೇ ಸದಾ ಸಿದ್ದವಿರುವ ಅನೇಕಬಗೆಯ ಶಾಂತಿಯ ವಿಧಾನಗಳನ್ನು ಮಾಡಲು ನಿರ್ಧರಿಸಲಾಯಿತು. ಎಲ್ಲದಕ್ಕೂ ಮುಂಚೆ ಒಮ್ಮೆ ಶಾಸ್ತ್ರಿಯವರ ಬಳಿಗೆ ಹೋಗಿಅವರ ಅಭಿಪ್ರಾಯದಂತೆ ಮುಂದುವರಿಯಲು ನಿಶ್ಚಯಯಿಸಿದ ನನ್ನ ತಮ್ಮ. ಆದರೆ ನಮ್ಮ ಮನೆಯ ಪುರೋಹಿತರು ಅಂದ್ರೆಶಾಸ್ತ್ರಿಗಳು ಬಹಳ ಶಾಂತವಾಗಿ ವಿಷಯವನ್ನು ಕೇಳಿ ಬಹಳ ಒಳ್ಳೆಯ ಶಕುನ ಎಂದು ಹೇಳಿದರು. ಅವರ ಪ್ರಕಾರ ನನ್ನ ಅತ್ಯಂತಹತ್ತಿರ ಸಂಭಂದಿಗಳಾದ ಒಬ್ಬರು ಇತ್ತೀಚೆಗಷ್ಟೇ ತೀರಿಕೊಂಡಿದ್ದು, ಅವರ ಆತ್ಮ ಕಾಗೆಯ ರೂಪದಲ್ಲಿ ನನ್ನ ತಮ್ಮನ ಮನೆಗೆ ಬಂದುಆಶೀರ್ವಾದ ಮಾಡಿಹೋಗಿರುವುದರಿಂದ ಯೋಚಿಸುವ ಪ್ರಮೇಯ ಇಲ್ಲ ಅಂತ ಹೇಳಿದ್ದರು. ನಮ್ಮ ಮನೆಯಲ್ಲಿ ನನ್ನ ತಮ್ಮನಿಂದಹಿಡಿದು ಎಲ್ಲರು ನಿಟ್ಟುಸಿರು ಬಿಟ್ಟರು.
ಪುರೋಹಿತರ ಮಾತನ್ನು ಚರ್ಚಿಸಿ ಇತ್ತೀಚಿಗೆ ನಮ್ಮ ಮನೆಯಲ್ಲಿ ತಾಯಿಯ ಸ್ಥಾನದಲ್ಲಿ ಇದ್ದು ತೀರಿ ಹೋದವರುಯಾರು? ಹೆಚ್ಚುಯೋಚಿಸುವ ಅವಶ್ಯಕತೆ ಇರಲಿಲ್ಲ.. ಕೆಲವೇ ವರ್ಷಗಳ ಹಿಂದೆ ನನ್ನ ಚಿಕ್ಕಮ್ಮ ಮಂಗಳೂರಲ್ಲಿ ತೀರಿಕೊಂಡಿದ್ದರು. ಎಲ್ಲರಿಗೂ ಒಂದುರೀತಿಯ ನೆಮ್ಮದಿ, ಖುಷಿ, ಭಾವೋದ್ವೇಗ. ಕಾರಣ ನಮ್ಮ ಶಾರದ ಚಿಕ್ಕಮ್ಮ ಪರಲೋಕದಲ್ಲಿದ್ದರೂ, ಮರೆಯದೆ ಬಂದು ಭೇಟಿ ನೀಡಿತನ್ನ ಕರ್ತವ್ಯವನ್ನು ಚಾಚು ತಪ್ಪದೆ ನಿಭಾಯಿಸಿದ್ದಾಳೆ. ಎಲ್ಲರು ಒಂದು ಅಂದುಕೊಂಡಿದ್ದ ದೊಡ್ಡ ಶನಿಕಾಟದ ಘಟನೆ ಚಿಕ್ಕಮ್ಮನಹೃದಯಸ್ಪರ್ಶಿ ಭೇಟಿಯಿಂದ ತಪ್ಪಿತೆಂದು, ಭಾವುಕರಾಗಿ ನಂತರ ಸುಮ್ಮನಾದರು.
ನನಗೆ ಮಾತ್ರ ಭಯಂಕರ ಕೋಪ ಮತ್ತು ದುಖ ಒಟ್ಟಿಗೆ ಆಯಿತು. ಕಾರಣ ಕರ್ಪೂರದ ಬೊಂಬೆ ಯಂತಿದ್ದ ನನ್ನ ಚಿಕ್ಕಮ್ಮನ ಆತ್ಮಕ್ಕೆ ಕಪ್ಪು ಕಾಗೆಯ ದೇಹವೇ ಯಾಕೆ ಬೇಕಾಯಿತು? ತಮ್ಮನ ಮನೆಗೆ ಪ್ರವೇಶಪಡೆಯಲು?...ಇಂದು ಇಲ್ಲದ ನನ್ನ ಚಿಕ್ಕಮ್ಮನಿಗೆ ಇದೊಂದು ರೀತಿಯ ಅವಮಾನ ಅನಿಸಿತು. ಮೂಡ ನಂಬಿಕೆಯ ಪರಮಾವಧಿ. ನನ್ನ ಮುದ್ದು ಚಿಕ್ಕಮ್ಮನನ್ನು ಕಲ್ಪನೆಯಲ್ಲೂ ಕಾಗೆಗೆ ಹೋಲಿಸಲು ಮನಸ್ಸು ಒಪ್ಪಲಿಲ್ಲ. ಕೊನೆ ಪಕ್ಷ ಮೊಲದ ರೂಪದಲ್ಲಾದರೂ ಬರಲಿಲ್ಲವೆಕೆ?ಅನಿಸಿತು. ನನ್ನ ನಿಜವಾದ ಭಾವನೆ ನಮ್ಮ ಮನೆಯಲ್ಲಿ ಒಂದು ರೀತಿಯ ಜೋಕ್ ಆಗಿ ಹೋಯ್ತು.
ಘಟನೆಯನ್ನು ಮತ್ತೊಮ್ಮೆ ಹಾಗೆ ಚರ್ಚಿಸಿದಾಗ ನಮ್ಮಮ್ಮ ಹೇಳಿದರು....ನನ್ನ ತಮ್ಮನ ಮನೆಗೆ ಕಾಗೆ ಬಂದಿರಲಿಲ್ಲ ಆದರೆ ಅವನೇ ಕಾಗೆಯ ಮನೆಯನ್ನು ಬಲವಂತವಾಗಿ ಆಕ್ರಮಿಸಿದ್ದಾನೆ.
ನೆನಪಿಗೆ ಬಂದ ಘಟನೆಯಿಂದ ನಗು ಬಂತು.. ನನ್ನ ಆಫಿಸ್ ಗೆ ಈಗ ತಾನೇ ಭೇಟಿ ಕೊಟ್ಟ ಅಥಿತಿಯೂ ದಾರಿ ತಪ್ಪಿ ತನ್ನ ಆವಾಸವೆಂದೆ ಬಂದಿರಬಹುದು..ನಿಜ.. ಮಿಲಿಯಾಂತರ ವರ್ಷಗಳಿಂದ ವಾಸಿಸುವ ನಮಗೆಲ್ಲ ಇರುವುದು ಒಂದೇ... ಆವಾಸ.. ಈಭೂಮಿ... ಇಲ್ಲಿ ಯಾವುದು ಯಾರದು? ಹೇಳುತ್ತೀರಾ ನೀವಾದರೂ??








Comments

Unknown said…
A developing country like ours would have been developed ages ago except for the superstition we Indians have. This is a very simple and meaningful example of Mooda Nambike.
Keep up with the good work Sheshagiri sir.
P.S: I do share your emotion about your "camphor doll" chikkamma being converted to a Black Crow!!!!!!!
Dear Raj...
Thanks for your eccouraging comments on my story..."Crow".
Please let me know about you.
My strong suspiscion is that you must be a student as you have addressed me as Sir...
Am I right?
Anonymous said…
Dear Seshu Sir,

"Crow" is considered as bad "SHAKUNA" in india... I really dont think its a mooda numbike or anything like that.. just recall about one of your students Mr.Thyagaraj, who committed suicide when he was in 9th standard. I was his classmate.. and i still remember him saying " Maga, nenne nanu bavi katte hatra batte tolita idde, sudden agi ondu kage nanna tale mele bandu kutkontu".. within a week of this i heard the news of his death..he hanged himself..

But.. i enjoyed reading your blog on crow..

Srikanth Kamath
9980006631
Unknown said…
Sir this is Basavaraj from UK, offcourse your student.......and a proud student!

Popular posts from this blog