ಮನ್ವಂತರ...

ಪ್ರಾಯ, ಎಪ್ಪತ್ತು ತಲುಪುವ ಎರಡು ವರ್ಷಗಳ ಅವಧಿಯಲ್ಲಿ,
ಕಳೆದಾಗಿದೆ ಇನ್ನೊಂದು ವರ್ಷ,
ಬಾಕಿ ಇರುವ ಬದುಕಿನ ಭಾಗಾಕಾರದಲ್ಲಿಅನಿರ್ಧಿಷ್ಟ ಶೇಷ,
ನಿಖರತೆ ಇಲ್ಲದೇ ಇನ್ನೂ ಅಸ್ಪಷ್ಟ. ಅಡವಿ ಸಾಮಿಪ್ಯದ ಉನ್ಮಾದ,
ಸಂತಸದ ವ್ಯಥೆಯಲ್ಲಿ, ಪಶ್ಚತ್ತಾಪ ನಿಲುವು,
ತಪ್ಪಿತಸ್ಥ ಸದಾ ತಟಸ್ಥ ನಿರ್ಮೋಹಿ ನಿರ್ವಿಕಾರ ನಿಲುವು.
ಪೆಡಸು ಕನಸುಗಳು ಬಲು ಬಿರುಸು,
ಸಾದನೆಗೆ ವೇದನೆಯ ಬೇನೆ ಬೇರೆ, ಸುಮ್ಮನೆ,
ಗುರಿ ಇನ್ನೂ ಗರಿಗರಿ, ಹಸಿಕೊಂಬೆಯ ಬುಗುರಿ,
ಗಿರಿಕಿಹೊಡೆಯುತಿದೆ ಹೊಡೆಸಿಕೊಳ್ಳಲು ಗುನ್ನ.
ಬಿಲಿಯಾನುಗಟ್ಟಲೆ ತುಂಬಿತುಳುಕುವ, ಜನರ ಸಂಕೀರ್ಣ ಸೂಕ್ಷ್ಮಬಲೆ
ಅನಿವಾರ್ಯದಲಿ ಹೆಣೆಯಲ್ಪಟ್ಟ ಅಪರಿಚತರಲ್ಲಿ ದೊಡ್ಡ ಸಿಕ್ಕು
ಒಬ್ಬರಿಗೊಬ್ಬರು ಶಾಶ್ವತ ಆಗುಂತಕರು, ಬ್ರಹ್ಮಗಂಟು
ಬಿಡಿಸಿಕೊಳ್ಳಲೇ ಬೇಕು ಜಟಿಲತೆಯ ಕುಸೂತಿ,ಸಾವಧಾನದಲ್ಲಿ
ನೆನಪಿನ ತೀವ್ರ ಕಂಪನ ನೆನಪಿನ ಕೋಶಗಳಲ್ಲಿ
ಯಾರ ಅರಿವು, ಯಾರ ನಿಲುವು? ಯಾರ ಬದುಕು ಎಲ್ಲಿಗೆ,
ಹೊಗೆಯಾಡಿ ಪ್ರಶ್ನೆಗಳು, ಜ್ವಲಿಸಿ ಉಳಿಯುವ ಬೂದಿ
ಹೀಗೆ...ಮತ್ತೆ, ಮತ್ತೆ ಗೊಂದಲ ನಿರುತ್ತರ ಹಂದರ
ಆಳವಾಗಿವೆ ಸಿದ್ಧಾಂತಗಳ ಕಂದರ.
ಗ್ರಹಿಕೆಯಲೇ ನಾಂದಿ ಹಾಡಿ, ಹಂಸಗೀತೆಯ ಆರೋಹಣದಲಿ ಆತ್ಮಾಹುತಿ
ಎಲ್ಲವೂ ಸ್ವಾಭಾವಿಕ, ಹುಟ್ಟಷ್ಟೇ ಅಲ್ಲ,ಸಾವು ಅಷ್ಟೇ ಸಹಜ, ಆದರೆ ಅಸ್ಪಷ್ಟ.
ಮಾನವನ ಸ್ವಾರ್ಥಮಂಡನೆ ವಾದಕ್ಕೆ ಅದೆಷ್ಟು ಪದಗಳು?
ಎಷ್ಟೊಂದು ವಿವರಣಾತ್ಮಕ ಅನುಭವ ಅಜ್ಞಾನ ಆಗರ!
ಸಂದೋರ್ಬೋಚಿತ ಪದ ಬಳಕೆಯನಂತರ ಸೇರಿವೆ ಸೆರೆಮನೆ
ವಾಕ್ಯವಾಗದ ಪದಗಳ ಹಾರ ಅರ್ಚನೆಯ ಮೊದಲೇ ಬಾಡಿ ನಿರ್ಮಾಲ್ಯ
ತಾಳೆಯಾಗದ ನಿರರ್ಥಕತೆಯಲಿ ಅಜಗಜಾಂತರ ಅಂತರ
ಇದೆಂತಹ ಮನ್ವಂತರ...?

Comments

Popular posts from this blog

ಕಾಗೆ....

Reunited...at last..